ಶಿರಸಿಯ ಬೇಡರ ವೇಷದ ಹಿಂದಿರುವ ರೋಚಕ ಸತ್ಯ

Posted by

·

ಶಿರಸಿಯ ಬೇಡರ ವೇಷ ಒಂದು ಸಾಂಸ್ಕೃತಿಕ ಕಲೆಯಾದರು ಇದಕ್ಕೆ ತನ್ನದೇ ಆದ ಸಾಂಪ್ರದಾಯಿಕ ಇತಿಹಾಸವಿದೆ. ವರ್ಷಕ್ಕೆ ಒಂದು ದಿನ ನಾಡಿನಾದ್ಯಂತ ಹೋಳಿ (ಓಕುಳಿ) ಸಂಭ್ರಮವಾದರೆ ಉತ್ತರ ಕನ್ನದದ ಶಿರಸಿಯಲ್ಲಿ ಒಂದು ವಾರದಿಂದಲೇ ಹೋಳಿ ಜೋರಾಗಿರುತ್ತದೆ. ಇಷ್ಟು ವಿಶಿಷ್ಟವಾಗಿರುವ ಸಂಭ್ರಮ ರಾಜ್ಯದಲ್ಲಿ ಎಲ್ಲೂ ಕಾಣದು. ಬೇಡರ ವೇಷದ ಮೂಲಕ ಸಾಂಸ್ಕೃತಿಕ ಜಾನಪದ ಸೊಬಗಿನ ಆಚರಣೆ ಇಲ್ಲಿನ ವೈಶಿಷ್ಟ್ಯ. ಎರಡು ವರ್ಷಕ್ಕೊಮ್ಮೆ ಈ ಹೋಳಿ ಸಂಭ್ರಮ ನಡೆಯುತ್ತೆ. ಬೆಳಗ್ಗೆ ಹುಲಿ ವೇಷ ಆದ್ರೆ ರಾತ್ರಿ ಬೇಡರ ವೇಷ ಇಲ್ಲಿಯ ವಿಶೇಷ.

ಈ ವಿಶಿಷ್ಟಬಗೆಯ ಆಚರಣೆಗೆ ಸುಮಾರು 300 ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರು ಆಳಿದ ನಂತರ ಆರಂಭವಾಗಿದ್ದು ಸೋಂದಾ ರಾಜರ ಆಡಳಿತ. ಅಂದು ಕಲ್ಯಾಣಪಟ್ಟಣವಾಗಿದ್ದ ಸೋಂದಾದ ಮೇಲೆ ಮುಸ್ಲಿಂರ ದಾಳಿ ನಡೆಯಬಾರದೆಂದು ಬೇಡ ಜನಾಂಗದ ಮಲ್ಲೇಶಿ ಎಂಬ ಯುವ ವೀರಾಧಿವೀರನನ್ನು ರಕ್ಷಣೆಗೆ ನೇಮಿಸುತ್ತಾರೆ. ಮೊದಲು ಸರಿಯಾಗಿ ಕರ್ತವ್ಯ ನಿರ್ವಹಿಸಿದ ಮಲ್ಲೇಶಿ ನಂತರ ದುರಾಡಳಿತ ಆರಂಭಿಸಿದ. ಆತ ರುದ್ರಾಂಬಿಕಾ ಎಂಬ ಸುಂದರಿಯನ್ನು ಲಗ್ನವಾಗಬೇಕೆಂದುಕೊಂಡಿರುತ್ತಾನೆ. ಮಲ್ಲೇಶಿಗೆ ಪಾಠ ಕಲಿಸಲೆಂದು ತನ್ನ ಜೀವನವನ್ನೇ ತ್ಯಾಗ ಮಾಡಿ ರುದ್ರಾಂಬಿಕಾ ಮಲ್ಲೇಶಿಯನ್ನು ಲಗ್ನವಾಗಲು ಒಪ್ಪುತ್ತಾಳೆ. ಹೋಳಿ ರಾತ್ರಿಯಂದು ಬೇಡ ವೇಷಧಾರಿಯಾಗಿ ಕುಣಿಯುತ್ತಿದ್ದ ಗಂಡನ ಕಣ್ಣಿಗೆ ಆಸಿಡ್ ಸುರುವಿ ಹೆಂಡತಿಯೇ ಹಿಡಿದುಕೊಡುತ್ತಾಳೆ. ಆಕೆಯನ್ನೇ ಕೊಲ್ಲಲು ಬಂದ ಗಂಡನನ್ನು ಜನರು ಹಿಡಿದು ಸಜೀವವಾಗಿ ಸುಟ್ಟುಬಿಡುತ್ತಾರೆ. ಹೆಂಡತಿ ರುದ್ರಾಂಬಿಕೆ ಗಂಡನ ಚಿತೆಯೇರಿ ಪ್ರಾಣತ್ಯಾಗ ಮಾಡುತ್ತಾಳೆ. ಆಕೆಯ ತ್ಯಾಗದ ಸಂಕೇತವಾಗಿ ಬೇಡವೇಷ ಹಾಕಿ ಕುಣಿಯುವ ಸಂಪ್ರದಾಯ ಶಿರಸಿಯಲ್ಲಿ ತಲತಲಾಂತರದಿಂದ ರೂಢಿಯಲ್ಲಿದೆ.

ಶಿರಸಿಯಲ್ಲಿ ಬೇಡರ ವೇಷ ಹೇಗಿರುತ್ತದೆ?
ಬೇಡರ ವೇಷ ಹಾಕಿಕೊಳ್ಳುವವರಿಗೆ ತಿಂಗಳುಗಳ ಕಾಲ ಕುಣಿತದ ತಾಲೀಮು ನಡೆಯುತ್ತಿದ್ದು, ಕುಣಿತದ ದಿನ ನವಿಲು ಗರಿ ಬಣ್ಣ, ಗೆಜ್ಜೆ, ಮೀಸೆ, ಹತ್ತಿ, ಕೆಂಪು ಬಟ್ಟೆ, ಕತ್ತಿ ಡಾಲು, ಲಿಂಬೆ, ಕೈಗೆ ಲಿಂಬೆ ಹಣ್ಣು ಕಟ್ಟಿಕೊಂಡು ಬರುತ್ತಾರೆ. ನಗರದ ಬೀದಿಗಳಲ್ಲಿ ಢಣ್ ಡಣಕು ಢಣ್ ಡಣಕು ಶಬ್ದ ಕೇಳುತ್ತದೆ. ಪ್ರೇಕ್ಷಕರ ಮಧ್ಯೆ ಕತ್ತಿ ಬೀಸುತ್ತ ವೇಷ ತೊಟ್ಟಿಕೊಂಡ ವ್ಯಕ್ತಿಯೋರ್ವ ವಿಶಿಷ್ಟವಾಗಿ ಕುಣಿಯುತ್ತಿದ್ದರೆ ಹಿಂಬದಿಯಿಂದ ಇಬ್ಬರು ಹಿಡಿದುಕೊಂಡು ನಿಯಂತ್ರಣ ಮಾಡುತ್ತಾರೆ. ತಮಟೆ ಬಡಿಯುತ್ತ ಕುಣಿಯುತ್ತಿದ್ದ ವ್ಯಕ್ತಿಗೆ ಹುರುಪು ನೀಡುತ್ತಾನೆ. ಬೇಡ ವೇಷಧಾರಿಯಾಗಿ ಕುಣಿಯೋದನ್ನ ನಗರದ ಜನ ರಾತ್ರಿಯಿಡೀ ನೋಡಿ ಕಣ್ತುಂಬಿಕೊಳ್ತಾರೆ.

ಸಂಜೆಯಿಂದಲೇ ಬಣ್ಣ ಬಳಿದುಕೊಂಡು ನವಿಲುಗರಿ ಸಿಕ್ಕಿಸಿಕೊಂಡು ಕತ್ತಿ ಹಿಡಿದು ರಾತ್ರಿ 9ರ ಬಳಿಕ ಊರಿನ ಬೀದಿಗಳಲ್ಲಿ ಬೇಡ ವೇಷಧಾರಿಯಾಗಿ ನಗರಾದ್ಯಂತ ಕುಣಿತಾನೆ. ತಡ ರಾತ್ರಿ 12-1 ಗಂಟೆ ಮಾತ್ರವಲ್ಲ ಮುಂಜಾನೆ ತನಕವೂ ನಗರದ ಪ್ರಮುಖ ಬೀದಿಗಳಲ್ಲಿ ಬೇಡರ ವೇಷ ಗಮನ ಸೆಳೆಯುತ್ತದೆ.

ಎಲ್ಲ ಕಲಾವಿದರೂ ಮೂಲ ಕಲ್ಪನೆಗೆ ಆದ್ಯತೆ ಕೊಡಬೇಕು. ನವಿಲುಗರಿ ಕಟ್ಟಿಕೊಂಡಿದ್ದೇವೆ ಎಂದು ನವಿಲು ನರ್ತನ ಮಾಡುವದು ಸರಿಯಲ್ಲ ಎನ್ನುತ್ತಾರೆ ಹಲವು ವರ್ಷಗಳಿಂದ ಬೇಡರ ವೇಷ ಕಟ್ಟುತ್ತಿರುವ ಪತ್ರಕರ್ತ ಜೆ.ಆರ್.ಸಂತೋಷಕುಮಾರ.

ವಿವಿಧ ಹರಕೆ ಹೊತ್ತುಕೊಂಡು ಈಡೇರಿದವರೂ ಹಗಲು ಹುಲಿ ವೇಷ ಹಾಕುತ್ತಾರೆ. ಈಗ ಹುಲಿ ವೇಷ ಹಾಕುವವರ ಸಂಖ್ಯೆ ಕಡಿಮೆ ಆಗಿದ್ದರು ನೋಡುಗರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading