ಶಿರಸಿ ಮಾರಿಕಾಂಬೆಯ ಇತಿಹಾಸ, ಮಹತ್ವ ಮತ್ತು ಜಾತ್ರಾ ಮಹೋತ್ಸವದ ಬಗ್ಗೆ ಗೊತ್ತೇ..?

Posted by

·

ಶಿರಸಿ ಮಾರಿಕಾಂಬಾ ದೇವಿ ದೇವಸ್ಥಾನವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸಾಕಷ್ಟು ಪ್ರಸಿದ್ಧವಾದ ದೇವಾಲಯವಾಗಿದೆ. ಇಲ್ಲಿನ ಜಾತ್ರಾ ಮಹೋತ್ಸವವೇ ವಿಶ್ವ ಪ್ರಸಿದ್ಧ. ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಇತಿಹಾಸವೇನು..? ಈ ದೇವಾಲಯದ ಮಹತ್ವವೇನು..? ಇಲ್ಲಿನ ಜಾತ್ರಾ ಮಹೋತ್ಸವ ಹೇಗಿರುತ್ತೆ ಗೊತ್ತೇ..?

ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯವು ಉತ್ತರ ಕನ್ನಡದ ಅತ್ಯಂತ ಪ್ರಸಿದ್ಧ ಮತ್ತು ಪುರಾತನ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯ ಉತ್ತರ ಕರ್ನಾಟಕದಲ್ಲಿದ್ದರು ಕೂಡ ಇದರ ಕೀರ್ತಿ ಸಂಪೂರ್ಣ ಕರ್ನಾಟಕವನ್ನೇ ಆವರಿಸಿಕೊಂಡಿದೆ. ದೇಶ ವಿದೇಶಗಳಿಂದ ಭಕ್ತರು ಈಕೆಯ ಆಶೀರ್ವಾದವನ್ನು ಪಡೆಯಲು ಇಲ್ಲಿಗೆ ಬರುತ್ತಾರೆ. ಎರಡು ವರ್ಷಗಳಿಗೊಮ್ಮ ಇಲ್ಲಿ ನಡೆಯುವ ಜಾತ್ರಾ ಮಹೋತ್ಸವವೇ ಇಲ್ಲಿನ ವಿಶೇಷ. ಶಿರಸಿಯ ಈ ಪ್ರಸಿದ್ಧ ಮಾರಿಕಾಂಬಾ ದೇವಾಲಯದ ಕುರಿತು ಮತ್ತಷ್ಟು ಮಾಹಿತಿ ಈ ಲೇಖನದಲ್ಲಿದೆ ನೋಡಿ..

ದೇವಾಲಯದ ಪ್ರವೇಶ ದ್ವಾರ:

ಈ ಪವಿತ್ರ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ದೇವಾಲಯದ ಇಕ್ಕೆಲಗಳಲ್ಲಿನ ಎರಡು ಆನೆಗಳ ಮೂರ್ತಿಯು ನಿಮ್ಮನ್ನು ದೇವಾಲಯದ ಒಳಗೆ ಆಹ್ವಾನಿಸುತ್ತದೆ. ಈ ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು ಕೊನೆಯವರೆಗೂ ಗೋಡೆಗಳ ಮೇಲೆ ಕೆಂಪು ಬಣ್ಣದಿಂದ ಪುರಾತನ ಕಥೆಗಳನ್ನು ಬರೆಯಲಾಗಿದೆ. ಭಕ್ತರು ಈ ಪುರಾತನ ಕಥೆಗಳನ್ನು ಇಲ್ಲಿ ಓದಿ ತಿಳಿದುಕೊಳ್ಳಬಹುದು. ಇನ್ನು ನೀವು ದೇವಾಲಯದ ಒಳಗೆ ಪ್ರವೇಶಿಸುತ್ತಿದ್ದಂತೆ ದೊಡ್ಡ ಸಭಾಭವನವನ್ನು ನೋಡಬಹುದು.

ಈ ಸಭಾಭವನವನ್ನು ನೀವು ಪ್ರವೇಶಿಸುತ್ತಿದ್ದಂತೆ ನಿಮ್ಮ ಮೈನವಿರೇಳಲು ಆರಂಭಿಸುತ್ತದೆ. ಯಾಕೆ ಗೊತ್ತಾ..? ಇಲ್ಲಿ ಕುಂತಿರುವವಳು ಬೇರಾರು ಅಲ್ಲ, ಆಕೆಯೇ ಇಲ್ಲಿನ ಎಂಟು ಕೈಗಳ, ಏಳಡಿ ಎತ್ತರದ, ವ್ಯಾಘ್ರನ ಮೇಲೆ ಆಸೀನಳಾದ ತಾಯಿ ಮಾರಿಕಾಂಬೆ. ಈಕೆಯನ್ನು ನೋಡುತ್ತಿದ್ದಂತೆ ಜೀವನವೇ ಧನ್ಯ ಎನ್ನುವ ಭಾವನೆ ನಿಮ್ಮಲ್ಲಿ ಮೂಡತೊಡಗುತ್ತದೆ. ಭವ್ಯವಾದ ಸಭಾಂಗಣ (ಬಹುಶಃ ಇಂತಹ ವಿಶಾಲವಾದ ಸಭಾಂಗಣಗಳು ಕರ್ನಾಟಕದಲ್ಲಿ ಅಪರೂಪ) ಮತ್ತು ವಿಸ್ತಾರವಾದ ಜಗುಲಿಗಳು ಸ್ವತಃ ಶ್ರೀ ಮಾರಿಕಾಂಬೆಯ ಹಿರಿಮೆಯನ್ನು ಸಾರುತ್ತವೆ. ದೇವಾಲಯದ ಮುಂಭಾಗದ ತೆರೆದ ಜಾಗವನ್ನು ಶ್ರೀ ಮಹಾಗಣಪತಿ, ಈಶ್ವರ ಮತ್ತು ಹನುಮಂತನ ಸಣ್ಣ ದೇವಾಲಯಗಳು ಆಕ್ರಮಿಸಿಕೊಂಡಿವೆ. ಗಣಪತಿಯ ದೇವಾಲಯವನ್ನು ಆಧುನಿಕ ರೀತಿಯಲ್ಲಿ ಪುನರ್ನಿರ್ಮಿಸಲಾಗಿದೆ.

ಮಾರಿಕಾಂಬಾ ದೇವಿ:

ಕರ್ನಾಟಕದಲ್ಲಿ ಮಾರಮ್ಮ ದೇವಿಯರಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಶಿರಸಿಯ ಈ ಮಾರಿಕಾಂಬಾ ದೇವಿಯನ್ನು ಕರ್ನಾಟಕದ ಎಲ್ಲಾ ಮಾರಿಯಮ್ಮ ದೇವಿಯರಿಗೆ ದೊಡ್ಡಕ್ಕ ಎಂದು ಕರೆಯಲಾಗುತ್ತದೆ. ಅಂದರೆ ಕೊಲ್ಲೂರಿನ ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿಗೂ ಈಕೆಯೇ ಅಕ್ಕ. ಶಿರಸಿಯ ಮಾರಿಕಾಂಬಾ ದೇವಾಲಯವನ್ನು ಶ್ರೀ ಮಾರಿಕಾಂಬಾ ದೇವಾಲಯ, ಅಮ್ನೋರ ಗುಡಿ, ಮಾರಿಗುಡಿ, ದೊಡ್ಡಮ್ಮನ ದೇವಸ್ಥಾನ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಈಕೆಯನ್ನು ಭೇಟಿಯಾಗಿ ನಮ್ಮೆಲ್ಲಾ ಕಷ್ಟಗಳನ್ನು ಹೇಳಿಕೊಂಡು ಭಕ್ತಿಯಿಂದ ಆರಾಧಿಸಿದರೆ ಖಂಡಿತವಾಗಿ ಎಲ್ಲಾ ಕಷ್ಟಗಳನ್ನು ದೂರಾಗಿಸಿ, ಮನಸ್ಸಿಗೆ ಅದೇನೋ ಶಾಂತಿ, ನೆಮ್ಮದಿಯನ್ನು ಕರುಣಿಸುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.

ಗೋಕರ್ಣದಿಂದ ಪೂರ್ವಕ್ಕೆ 83 ಕಿಮೀ (51 ಮೈಲುಗಳು) ದೂರದಲ್ಲಿರುವ ಶ್ರೀ ಮಾರಿಕಾಂಬಾ ದೇವಾಲಯವನ್ನು ದೊಡ್ಡಮ್ಮ ದೇವಸ್ಥಾನ ಎಂದೂ ಕರೆಯಲಾಗುತ್ತದೆ, ಅಂದರೆ ಕರ್ನಾಟಕದ ಎಲ್ಲಾ ಮಾರಿಯಮ್ಮಗಳ ಹಿರಿಯ ಸಹೋದರಿ. ಶ್ರೀ ಮಾರಿಕಾಂಬಾ ದೇವಾಲಯವನ್ನು 1688 ರಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.

ಶ್ರೀ ಮಾರಿಕಾಂಬಾ ದೇವಸ್ಥಾನದ ಇತಿಹಾಸ:

ಹಾನಗಲ್‌ನಿಂದ ಶಿರಸಿಗೆ ದೇವಿಯ ವಿಗ್ರಹ ಬಂದಿತೆಂದು ಪುರಾಣಗಳು ಹೇಳುತ್ತವೆ. ಹಾನಗಲ್‌ನಲ್ಲಿ ಪ್ರಬಲ ಶಕ್ತಿ ಪೀಠಗಳಿವೆ ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ವನವಾಸದಲ್ಲಿದ್ದ ಧರ್ಮರಾಯ ವಿರಾಟನಗರದ ಕಡೆಗೆ ಹೊರಟಿದ್ದ. ಅವರು ಗ್ರಾಮದ ಪ್ರವೇಶದ್ವಾರದಲ್ಲಿ ದುರ್ಗೆಯನ್ನು ನೋಡಿದರು. ಸಮಾಜದ ರಕ್ಷಣೆ, ದಯೆ ಮತ್ತು ಕಲ್ಯಾಣಕ್ಕಾಗಿ ಅವರು ಅಲ್ಲಿ ಆಕೆಯನ್ನು ಪೂಜಿಸಿದರು ಎನ್ನಲಾಗುತ್ತದೆ. ಹಾನಗಲ್‌ನ್ನು ಆ ಸಂದರ್ಭದಲ್ಲಿ ವಿರಾಟನಗರ ಎಂದು ಕರೆಯಲಾಗುತ್ತಿತ್ತು. ಇದನ್ನು ಚಾಲುಕ್ಯರ ಶಾಸನಗಳಲ್ಲಿ ‘ವಿರಾಟನ ಕೋಟೆ’ ಎಂದೂ ಉಲ್ಲೇಖಿಸಲಾಗಿದೆ. ಹಾನಗಲ್‌ ಮಹಾರಾಷ್ಟ್ರದ ವಿರಾಟನಗರ ಎಂದು ಸಂಶೋಧಕರೂ ದಾಖಲಿಸಿದ್ದಾರೆ. ಕುಂತಿ ದಿಬ್ಬ (ಕುಂತಿಯ ದಿಬ್ಬ) ಹಿಂದೆ ಶ್ರೀ ದೇವಿಯು ಕುಳಿತಿದ್ದ ತ್ರಿಭುವನೇಶ್ವರಿಯ ಸ್ಥಾನವಾಗಿತ್ತು ಎಂದು ವಿದ್ವಾಂಸರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಇಲ್ಲಿ ಶ್ರೀ ದೇವಿಯ ಜಾತ್ರೆಯು ಶ್ರದ್ಧೆ ಮತ್ತು ಭಕ್ತಿಯಿಂದ ನಡೆಯುತ್ತದೆ.

ಹಾನಗಲ್ ಜಾತ್ರಾ ಮಹೋತ್ಸವದ ನಂತರ ದೇವಿಯ ವಿಗ್ರಹವನ್ನ ಆಭರಣ ಸಮೇತ ಪೆಟ್ಟಿಗೆಯಲ್ಲಿ ಹಾಕಿಟ್ಟಿದ್ದರು. ಅದನ್ನ ಎತ್ತಿಕೊಂಡು ಹೋದ ಕಳ್ಳರು ಆಭರಣಗಳನ್ನೆತ್ತಿಕೊಂಡು ವಿಗ್ರಹವಿದ್ದ ಪೆಟ್ಟಿಗೆಯನ್ನ ಶಿರಸಿಯ ದೇವಿಕೆರೆಯಲ್ಲಿ ಹಾಕಿದರು. ಬಸವ ಎನ್ನುವ ಭಕ್ತನೊಬ್ಬ ಪ್ರತಿ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗುತ್ತಿದ್ದ. ಒಂದು ಬಾರಿ ಅವನನ್ನು ಜನರು ಪೀಡಿಸಿದರು. ಅದರಿಂದ ಬೇಸರಗೊಂಡ ಅವನು ಚಂದ್ರಗುತ್ತಿಯ ಜಾತ್ರೆಗೆ ಹೋಗದೆ ಶಿರಸಿಯಲ್ಲಿಯೇ ದೇವಿಯ ಆರಾಧನೆ ಮಾಡಿದನು.

ಒಂದು ರಾತ್ರಿ ದೇವಿ ಅವನಿಗೆ ಕನಸಿನಲ್ಲಿ “ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ. ನನ್ನನ್ನು ಮೇಲೆತ್ತು” ಎಂದು ಹೇಳುತ್ತಾಳೆ. ಅದರಂತೆ ಪೆಟ್ಟಿಗೆಯಲ್ಲಿದ್ದ ದೇವಿಯ ಬಿಡಿಭಾಗಗಳನ್ನ ಸೇರಿಸಿ 1911 ರ ವೈಶಾಖ ಶುದ್ಧ ಅಷ್ಟಮಿಯ ಮಂಗಳವಾರ ದೇವಿಯ ಪ್ರತಿಷ್ಠಾಪನೆಯಾಯಿತು. ನಂತರ ಅದೇ ಜಾಗದಲ್ಲಿ ಭವ್ಯವಾದ ದೇವಾಲಯ ನಿರ್ಮಾಣವಾಯಿತು. ದೇವಿಯ ವಿಗ್ರಹ ಸಿಕ್ಕಿದ ಮೇಲೆ ಆ ಕೆರೆಗೆ ದೇವಿಕೆರೆ ಎಂದು ನಾಮಕರಣ ಮಾಡಲಾಯಿತು.

ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮತ್ತೊಂದು ಕಥೆಯನ್ನು ಕೂಡ ಹೇಳಲಾಗಿದೆ. ಸುಂದರ ಬ್ರಾಹ್ಮಣ ಯುವತಿಯನ್ನು ಅನ್ಯ ಜಾತಿಯ ಯುವಕನೋರ್ವ ವಿವಾಹವಾಗುವ ಬಯಕೆಯಿಂದ ಮಾಂಸಾಹಾರವನ್ನು ತ್ಯಜಿಸಿ, ಬ್ರಾಹ್ಮಣರಂತೆ ಮಂತ್ರ, ಪೂಜೆಯನ್ನು ಕಲಿತು ಬ್ರಾಹ್ಮಣ ಮುಖವಾಡವನ್ನು ಹಾಕಿಕೊಂಡ. ಈತನನ್ನು ಶುದ್ಧ ಬ್ರಾಹ್ಮಣನೆಂದು ತಿಳಿದ ಆ ಸುಂದರ ಬ್ರಾಹ್ಮಣ ಯುವತಿಯು ಆತನನ್ನು ವಿವಾಹವಾಗುತ್ತಾಳೆ. ಆದರೆ, ಒಂದು ದಿನ ಅನ್ಯ ಜಾತಿಯ ಯುವಕನಿಗೆ ಮಾಂಸಾಹಾರವನ್ನು ಕಂಡು ತಿನ್ನಬೇಕೆಂದು ಆಸೆಯಾಗಿ ತಿನ್ನುತ್ತಾನೆ. ಇದನ್ನು ತಿಳಿದ ಆತನ ಬ್ರಾಹ್ಮಣ ಪತ್ನಿಯು ಆತನ ರುಂಡವನ್ನು ಕತ್ತರಿಸಿ, ಇಡೀ ಮನೆಗೆ ಬೆಂಕಿ ಹಚ್ಚಿ, ತಾನು ಕೂಡ ಪತಿಯೊಂದಿಗೆ ಬೆಂಕಿಯಲ್ಲಿ ಆಹುತಿಯಾಗುತ್ತಾಳೆ. ಈಕೆಯ ಧರ್ಮ ನಿಷ್ಠೆಯನ್ನು ನೋಡಿದ ಊರಿನವರು ಆಕೆಯನ್ನು ದುರ್ಗೆಯ ಅವತಾರ ಎಂದು ಪೂಜಿಸಲು ಆರಂಭಿಸಿದರೆನ್ನುವ ಕಥೆಯೂ ಇದೆ.

ಶಿರಸಿ ಮಾರಿಕಾಂಬಾ ಜಾತ್ರೆ:

ಫಾಲ್ಗುಣ ಮಾಸದಲ್ಲಿ ಎರಡು ವರ್ಷಗಳಿಗೊಮ್ಮೆ ಇಲ್ಲಿ ಸತತ 9 ದಿನಗಳವರೆಗೆ ಅದ್ದೂರಿ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗುತ್ತದೆ. ಇದು ರಾಜ್ಯದ ಅತ್ಯಂತ ಪ್ರಸಿದ್ಧ ಮತ್ತು ದೊಡ್ಡ ಜಾತ್ರೆ ಎಂದು ಹೇಳಲಾಗುತ್ತದೆ. ರಾಜ್ಯದೆಲ್ಲೆಡೆಯಿಂದ ಭಕ್ತರು ಈ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಜಾತ್ರೆಯ ದಿನ ದೇವಿಯ ಮೂಲ ವಿಗ್ರಹಕ್ಕೆ ಸರ್ವಾಲಂಕಾರವನ್ನು ಮಾಡಿ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಹತ್ತಿರದ ಬಿಡ್ಕಿ ಮೈದಾನದಲ್ಲಿ ಸ್ಥಾಪಿಸಿ ಅಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ದೇವಿಗೆ ವಿವಾಹ ಮಾಡುವ ಸಂಪ್ರದಾಯದೊಂದಿಗೆ ಆರಂಬವಾದ ಜಾತ್ರೆಯು 9ನೇ ದಿನ ಕೋಣ ಬಲಿ ಕೊಟ್ಟು ಚಪ್ಪರಕ್ಕೆ ಬೆಂಕಿ ಹಚ್ಚುವುದರೊಂದಿಗೆ ಮುಕ್ತಾಯವಾಗುತ್ತದೆ. ಇಲ್ಲಿ ಬಲಿ ಕೊಡುವ ಕೋಣವು ಬ್ರಾಹ್ಮಣ ಮುಖವಾಡ ಧರಿಸಿ ಬ್ರಾಹ್ಮಣ ಯುವತಿಯನ್ನು ವಿವಾಹವಾದ ಯುವಕ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು. ಆದರೆ ಈಗ ಕೋಣ ಬಲಿಯನ್ನು ಇಲ್ಲಿ ನಿಷೇಧಿಸಲಾಗಿದ್ದು, ಕೋಣವನ್ನು ಬಲಿ ಕೊಡುವ ಬದಲು ಬೂದುಕುಂಬಳಕಾಯಿಯನ್ನು ಒಡೆಯುವ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇತಿಹಾಸದ ಪ್ರಕಾರ, ಈ ದೇವಾಲಯಕ್ಕೆ ಗಾಂಧೀಜಿ ಭೇಟಿ ನೀಡಿದ್ದಾಗ ಕೋಣ ಬಲಿಯನ್ನು ತಿರಸ್ಕರಿಸಿದ್ದರಂತೆ. ಅಂದಿನಿಂದ ಗಾಂಧೀಜಿಯ ಅನುಯಾಯಿಗಳು ಜನಸಾಮಾನ್ಯರಿಗೆ ಅಹಿಂಸಾ ತತ್ವ ಭೋಧಿಸಿ , ಮೂಡ ನಂಬಿಕೆ ದೂರ ಮಾಡಿ ಪ್ರಾಣಿ ಬಲಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರೂ ಎಂದು ಹೇಳಲಾಗುತ್ತದೆ. ಈ ಹಿಂದೆ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ನಡೆಯುತ್ತಿದ್ದ ಕೋಣಗಳ ಬಲಿಯನ್ನು ಕೂಡ ನಿಷೇಧಿಸಲಾಗಿದೆ.

ಜಾತ್ರಾ ಮಹೋತ್ಸವ ಮುಗಿದ 10 ದಿನಗಳವರೆಗೆ ಇಡೀ ಊರಿನವರಿಗೆ ಸೂತಕವಿರುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಯಾವುದೇ ಶುಭ ಕಾರ್ಯವನ್ನು ಆಯೋಜಿಸುವುದಿಲ್ಲ. ಈ ಅವಧಿಯಲ್ಲಿ ದೇವಿಯ ವಿಗ್ರಹವನ್ನು ದೇವಾಲಯದ ಹಿಂಭಾಗದಲ್ಲಿನ ಕೆರೆಯಲ್ಲಿ ಮುಳುಗಿಸಿಟ್ಟು, ದೇವಾಲಯದ ಬಾಗಿಲನ್ನು ಮುಚ್ಚು ಸಂಪ್ರದಾಯವಿದೆ. ನಂತರ ಯುಗಾದಿಯಂದು ಈ ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲಾಗುತ್ತದೆ. ಮತ್ತು ಜಾತ್ರೆಯ ನಂತರ ಕೋಣವನ್ನು ಹರಾಜಿನಲ್ಲಿ ಮಾರಲಾಗುತ್ತದೆ. ಹಾಗೂ ದೇವಾಲಯದಲ್ಲಿ ಮತ್ತೆ ಎಂದಿನಂತೆ ಪೂಜೆ ಕಾರ್ಯಗಳು ನಡೆಯಲಾರಂಭಿಸುತ್ತದೆ. ಈ ಅದ್ಭುತ ಹಾಗೂ ಪವಿತ್ರ ದೇವಾಲಯಕ್ಕೆ ಒಮ್ಮೆಯಾದರೂ ನಾವು ಭೇಟಿಯಾಗಬೇಕಲ್ಲವೇ..?

ಮಾಹಿತಿ ಮೂಲ: ವಿಜಯ ಕರ್ನಾಟಕ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading