ಸೋಂದಾ ಕ್ಷೇತ್ರವು ಕರ್ನಾಟಕದಲ್ಲಿರುವ ಪವಿತ್ರ ಸ್ಥಳಗಳಲ್ಲಿ ಒಂದು. ವಿವಿಧ ಪ್ರದೇಶದ ಜನರಿಂದ ಸೋಂದಾ, ಸೋದೆ, ಸ್ವಾದಿ ಮುಂತಾದ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವು ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಸಮೀಪವಿದೆ. ಇದು ಬೆಂಗಳೂರಿನಿಂದ 450 ಕಿ.ಮೀ. ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಿ೦ದ 25 ಕಿಲೋ ಮೀಟರ್ ದೂರದಲ್ಲಿದೆ. ಶಿರಸಿಯಿಂದ ತಲುಪಲು ಸಾಕಷ್ಟು ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳ ಸೌಕರ್ಯ ಇದೆ. ಇಲ್ಲಿ ಮಾಧ್ವ ಯತಿಗಳಲ್ಲೊಬ್ಬರಾದ ಮತ್ತು ದಾಸ ಸಾಹಿತ್ಯದಲ್ಲಿಯೂ ಕೊಡುಗೆ ಸಲ್ಲಿಸಿರುವ ವಾದಿರಾಜರ ಬೃಂದಾವನವಿದೆ. ಇಲ್ಲಿ ಶ್ರೀ ಜೈನಮಠ ಮತ್ತು ಶ್ರೀ ಸ್ವರ್ಣವಲ್ಲಿಮಠಗಳೂ ಇವೆ. ಇದು ಪ್ರಕೃತಿ ಸೌಂದರ್ಯ ವೀಕ್ಷಣಿಗೂ ಸೂಕ್ತ ಸ್ಥಳವಾಗಿದೆ. ಈ ಕ್ಷೇತ್ರದಲ್ಲಿ ವಾದಿರಾಜರ ಬೃಂದಾವನವಲ್ಲದೆ, ತ್ರಿವಿಕ್ರಮ ದೇವರ ಮತ್ತು ಭೂತರಾಜರ ಗುಡಿಗಳಿವೆ. ತ್ರಿವಿಕ್ರಮ ದೇವರ ಗುಡಿಯಲ್ಲಿ ವಾದಿರಾಜರು ಪೂಜೆ ಸಲ್ಲಿಸುತ್ತಿದ್ದರೆಂದು ಹೇಳಲಾಗುತ್ತದೆ. ವಾದಿರಾಜರಿಗೆ ಸಂಬಂಧಿಸಿದ ಕೆಲವು ಕೃತಿ, ಹಾಡುಗಳಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ.
ಭೂತರಾಜರ ಗುಡಿಇಲ್ಲಿರುವ ಭೂತರಾಜರ ಗುಡಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ತನ್ನ ಪ್ರಶ್ನೆಗಳ ಮೂಲಕ ವಾದಿರಾಜರನ್ನು ಸೋಲಿಸಿ, ಅವರಿಗೆ ಉಪದ್ರ ಕೊಡಬೇಕೆಂದು ಬಂದ ಭೂತಕ್ಕೆ ತಕ್ಕ ಉತ್ತರ ಕೊಟ್ಟು ವಾದಿರಾಜರು ಅದನ್ನು ಸೋಲಿಸಿದರೆಂಬ ಪ್ರತೀತಿ ಇದೆ. ಆ ಕಾರಣದಿಂದ ಭೂತ ವಾದಿರಾಜರ ಸೇವಕನಾಗಿ, ಈ ಕ್ಷೇತ್ರದಲ್ಲಿ ನೆಲೆಸಿದೆ ಎಂದು ಸ್ಥಳೀಯರ ನಂಬಿಕೆಯಾಗಿದೆ. ಈಗಲೂ ಮಾನಸಿಕ ರೋಗಗಳಿಂದ ನರಳುತ್ತಿರುವ( ದೆವ್ವ ಹಿಡಿದವರು ಎಂದು ಹೇಳಲಾಗುವವರು) ಜನರನ್ನು ಈ ಸ್ಥಳಕ್ಕೆ ಕರೆತರಲಾಗುತ್ತದೆ. ಅವರು ಭೂತರಾಜರಿಗೆ ಹರಕೆ, ಸೇವೆಗಳನ್ನು ಸಲ್ಲಿಸುವುದರಿಂದ ಅವರ ಮನೋವಿಕಾರಗಳು ದೂರವಾಗುತ್ತದೆ ಎಂದು ಜನರ ನಂಬಿಕೆಯಾಗಿದೆ. ವಾದಿರಾಜರ ಬೃಂದಾವನದ ಸಮೀಪದಲ್ಲಿ ಧವಳ ಗಂಗಾ ಎಂಬ ಸರೋವರವಿದೆ. ಈ ಕೊಳದ ಒಂದು ಮೂಲೆಯನ್ನು ಭೂತರಾಜರ ಸ್ಥಳ ಎಂದು ಕರೆಯಲಾಗುತ್ತದೆ. ಆ ಸ್ಥಳವನ್ನು ಜನರು ಉಪಯೋಗಿಸುವುದಿಲ್ಲ. ವಾದಿರಾಜರು ಧವಳ ಗಂಗೆಯ ಗಂಗಾಧರ ಮಹಾಲಿಂಗ ಎಂದು ಶಿವನನ್ನು ಸ್ತುತಿಸಿರುವ ಕೀರ್ತನೆಯು ಇದೇ ಸರೋವರದ ಕುರಿತಾಗಿದೆ. ತಪೋವನದಟ್ಟ ಕಾಡಿನ ನಡುವೆ ಇರುವ ಒಂದು ಪ್ರದೇಶದಲ್ಲಿ ವಾದಿರಾಜರು ತಪಸ್ಸು ಮಾಡುತ್ತಿದ್ದರೆಂದು ಹೇಳಲಾಗುತ್ತದೆ. ಶಾಲ್ಮಲಾ ನದಿ ಇಲ್ಲಿ ಸಣ್ಣದಾಗಿ ಹರಿಯತ್ತದೆ. ನದಿ ತೀರದ ಬಂಡೆಯೊಂದರೆಲ್ಲಿ ವಾದಿರಾಜರ ಇಷ್ಟ ದೈವವಾದ ಹಯಗ್ರೀವ ದೇವರ ಚಿತ್ರವನ್ನು ಕಾಣಬಹುದಾಗಿದೆ.
ಹತ್ತಿರದ ಪ್ರೇಕ್ಷಣೀಯ ಸ್ಥಳಗಳು: ಶಿರಸಿಯ ಮಾರಿಕಾಂಬಾ ದೇವಸ್ಥಾನ, ಸಹಸ್ರಲಿಂಗ ಮತ್ತು ಯಾಣ ಇಲ್ಲಿಗೆ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು.


















Leave a Reply