ಬಹುಷಃ, ಎಲ್ಲರೂ ದೈವಿಚ್ಚೆಯಂತೆ ಮದುವೆ ಆಗಬೇಕು, ದೇವರ ಆಶೀರ್ವಾದ ನೂತನ ದಂಪತಿಗಳ ಮೇಲಿರಬೇಕು ಎಂದು ಬೇಡಿಕೊಳ್ಳುವುದು ಸಾಮಾನ್ಯ.

ಆದರೆ ಇಲ್ಲೊಂದು “ಮದುವೆ” ದೇವರ ಸಮ್ಮುಖದಲ್ಲಿ, ದೇವರೇ ವರ ಮತ್ತು ವಧುವನ್ನು ಆಯ್ಕೆಮಾಡಿ ಭಕ್ತವೃoದದ ಸಮ್ಮುಖದಲ್ಲಿಯೇ ಬಹಿರಂಗವಾಗಿ ತಾಳಿ ಕಟ್ಟಿಸಿ ಮದುವೆ ಶಾಸ್ತ್ರ ಮುಗಿಸುವ ಸಂಪ್ರದಾಯವೊಂದು ಅಂಕೋಲೆಯಲ್ಲಿ ಅನಾದಿಕಾಲದಿಂದ ನಡೆದುಬಂದಿದೆ. ಇಲ್ಲಿ ವಧು ವರರ ಆಯ್ಕೆಗೆ ಪಾಲಕರ ವಿನಂತಿ ಅಥವಾ ಪರವಾನಗಿಯ ಅವಶ್ಯಕತೆಯೂ ಇಲ್ಲ. ಸೇರಿದ ಜನರ ಮಧ್ಯದಲ್ಲಿ ಈ ಆಯ್ಕೆ.


ಹಾಂ, ಇದು ನಮ್ಮ ಬಂಡಿಹಬ್ಬದ ಸಂಪ್ರದಾಯದ 13ನೇ ದಿನದಂದು ಮುಂಜಾನೆ ದೇವರು ಆಡುವ ಕಟ್ಟೆಯಲ್ಲಿ ನಡೆಯುವ ಸಾರ್ವಜನಿಕ ಮದುವೆ. ಬಂಡಿಹಬ್ಬದ ಸಂದರ್ಭದಲ್ಲಿ ಇಲ್ಲಿ ರೈತಾಪಿ ವರ್ಗದವರು ಕೃಷಿಯನ್ನು ಹೇಗೆ ಆರಂಭಿಸಿ ಕಷ್ಟಪಟ್ಟು ಬೆಳೆಯನ್ನು ಪಡೆದು ಸಂಭ್ರಮಿಸುವರು ಎಂಬುದನ್ನು ಮತ್ತು ಆ ಖುಷಿಯಲ್ಲಿ ಕುಟುಂಬದ ಸದಸ್ಯರ ಮದುವೆಯನ್ನು ಸರಳವಾಗಿ ಹೇಗೆ ಮಾಡುವರು ಎಂಬುದನ್ನು ತೋರಿಸುವುದೇ ಈ ಸಂಪ್ರದಾಯ. ವಧು ವರರ ಆಯ್ಕೆ, ಅವರ ಶ್ರoಗಾರ, ವೀಳ್ಯದೆಲೆ ನೀಡಿ ಮದುವೆಗೆ ಆಮಂತ್ರಿಸುವುದು, ಪರಂಪರೆಯನ್ನು ಪಾಲಿಸಿ ಮದುವೆ ಮಾಡುವುದು ಎಲ್ಲವೂ ದೇವರ ಅಣತಿಯಂತೆ ನಡೆಯುವುದು ವಿಶೇಷ.


ಇಂದು ನಡೆದ ಈ ಮದುವೆಯಲ್ಲಿ ಊರಿನ ಅನೇಕರು, ಪರಊರಿನಿಂದ ಬಂದವರು ಭಾಗವಹಿಸಿದ್ದಲ್ಲದೆ ಹಿರಿ ಕಿರಿಯ ಗುನುಗರು, ಕಟಗಿದಾರರು,ವಾದ್ಯವೃoದದವರು ಭಾಸ್ಕರ ನಾರ್ವೇಕರ, ಶಶಿಧರ ಭಟ್, ಸಂಗೀತ ವಿದ್ವಾನ್ ಕೃಷ್ಣಮೂರ್ತಿ ಗುನಗ ಮುಂತಾದವರು ಆಶೀರ್ವದಿಸಿದರು. ತಮ್ಮ ಶುಭೀಚ್ಚೆಯೂ ಅವರಿಗಿರಲಿ.
ಮೂಲ ಲೇಖಕರು: ಸುಭಾಸ್ ನಾರ್ವೆಕರ್


Leave a Reply