ಅನಂತ್ ನಾಗ್ – ಉತ್ತರ ಕನ್ನಡದ ಹೆಮ್ಮೆಯ ಪುತ್ರ, ಬಾಲ್ಯದ ಶಿಕ್ಷಣ, ಜೀವನ

Posted by

·

ಹೆಮ್ಮಯ ಉತ್ತರಕನ್ನಡಿಗ
ಅನಂತನಾಗ್ (ಅನಂತ್ ನಾಗರಕಟ್ಟೆ) – ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ತಮ್ಮ ಸ್ಫುರದ್ರೂಪ ಮತ್ತು ಸಹಜ ನಟನೆಯಿಂದ ಭಾರತದಾದ್ಯಂತ ಅಪರೂಪದ ನಟ ಎಂದು ಹೆಸರಾದವರು. ಇವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಅನಂತ್ ನಾಗರಕಟ್ಟೆ
ಸೆಪ್ಟೆಂಬರ್-೦೪-೧೯೪೮
ಶಿರಾಲಿ, ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ)

ನಟ/ರಾಜಕಾರಣಿ

ಬಾಳ ಸಂಗಾತಿ:
ಗಾಯತ್ರಿ (ಮ. ೧೯೮೭)
ಮಕ್ಕಳು:
ಅದಿತಿ ಅನಂತ್ ನಾಗ್
ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ ೪, ೧೯೪೮ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಕನ್ನಡ, ಕೊಂಕಣಿ ಮತ್ತು ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು. ಅನಂತನಾಗ್ ಅವರ ಸಹೋದರ ಶಂಕರನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್ ಇವರಿಬ್ಬರೂ ಸಹ ಖ್ಯಾತ ಕಲಾವಿದರು.

ಸಪ್ತಭಾಷಾ ನಟ

ಚಿತ್ರರಂಗದಲ್ಲಿ ಅವರಿವರನ್ನು “ಪಂಚ ಭಾಷಾ ತಾರೆ” ಎಂದು ಕರೆಯುವುದುಂಟು, ಆದರೆ ಅನಂತನಾಗ್ ಸಪ್ತಭಾಷಾ ತಾರೆ. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿ ಎಲ್ಲೆಲ್ಲೂ ವಿಜೃಂಭಿಸಿದ್ದಾರೆ. ಕನ್ನಡದಲ್ಲಿ ಹೇಗೋ ಹಾಗೆಯೇ ಹಿಂದಿಯಲ್ಲಿ ಸಹ ಅನೇಕ ಸ್ಮರಣೀಯ ಚಿತ್ರಗಳನ್ನು ನೀಡಿದ್ದಾರೆ.

ವಿವಿಧ ಭಾಷೆಗಳ ಪ್ರಸಿದ್ಧ ಚಿತ್ರಗಳಲ್ಲಿ ಅನಂತನಾಗ್ ಅವರು ಶ್ಯಾಂ ಬೆನೆಗಲ್ ಅವರ ‘ಅಂಕುರ್’ ಚಿತ್ರದಿಂದ ಚಿತ್ರರಂಗಕ್ಕೆ ಬಂದವರು. ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ, ಮಂಗಳಸೂತ್ರ್, ಕೊಂಡುರಾ ಮತ್ತು ರಾತ್ ಸೇರಿದಂತೆ ಹಲವಾರು ಹಿಂದಿ ಚಿತ್ರಗಳಲ್ಲಿ ಅನಂತ್ ನಟಿಸಿದ್ದಾರೆ. ಕೆಲವೊಂದು ಪಾತ್ರಗಳಿಗೆ ಅನಂತ್ ಬೇಕೇ ಬೇಕು ಎಂದು ಬಯಸುವ ಚಿತ್ರರಂಗದ ಪ್ರಸಿದ್ಧರು ಎಲ್ಲೆಡೆಯ ಮೂಲೆ ಮೂಲೆಗಳಲ್ಲಿದ್ದಾರೆ.
ಮರಾಠಿಯ ಅಮೋಲ್ ಪಾಲೇಕರ್ ನಿರ್ದೇಶನದ ‘ಅನಾಹತ್’, ಮಲಯಾಳಂನ ‘ಸ್ವಾತಿ ತಿರುನಾಳ್’, ತೆಲುಗಿನ ‘ಅನುಗ್ರಹಂ’, ಇಂಗ್ಲಿಷಿನ ‘ಸ್ಟಂಬಲ್’ ಮುಂತಾದ ಹಲವಾರು ಚಿತ್ರಗಳನ್ನು ಈ ನಿಟ್ಟಿನಲ್ಲಿ ಗಮನಿಸಬಹುದು. ಇವೆಲ್ಲಾ ಯಾರೋ ಒಬ್ಬ ನಟರು ಬಂದು ಅಭಿನಯಿಸಿ ಹೋದರು ಎಂಬಂತಹ ಪಾತ್ರಗಳಲ್ಲದೆ ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹವಾದ ಚಿತ್ರಗಳು ಎಂಬುದನ್ನು ನಾವು ಗಮನಿಸಬೇಕು.

ಕನ್ನಡ ಚಿತ್ರರಂಗದಲ್ಲಿ ಅನಂತನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬಂದದ್ದು ೧೯೭೩ರಲ್ಲಿ ಮೂಡಿಬಂದ ಪಿ.ವಿ. ನಂಜರಾಜ ಅರಸ್ ಅವರ ‘ಸಂಕಲ್ಪ’ ಚಿತ್ರದಿಂದ. ‘ಸಂಕಲ್ಪ’ ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ. ಅನಂತನಾಗ್ ಅವರನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದ ಚಿತ್ರ ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಅವರ ‘ಹಂಸಗೀತೆ’. ‘ಹಂಸಗೀತೆ’ಯಿಂದ ಅನಂತನಾಗ್ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಜನಪ್ರಿಯರಾದರು. ಮುಂದೆ ೧೯೭೭ರ ದೊರೈ ಭಗವಾನರ ‘ಬಯಲುದಾರಿ’ ಅವರನ್ನು ಕನ್ನಡದ ಮನೆಮನೆಯಲ್ಲೂ ಮನಮನಗಳಲ್ಲೂ ಪ್ರತಿಷ್ಠಾಪಿಸಿತು. ಅನಂತ್ ಅಭಿನಯಿಸಿದ ಕೆಲವೊಂದು ಚಿತ್ರಗಳಂತೂ ಬೇರೆಯವರಿಗೆ ಅದು ಸಾಧ್ಯ ಎಂದು ಊಹಿಸಲೂ ಕಷ್ಟಕರವಾದದ್ದು. ಅನಂತ್ ಅವರು ಅಭಿನಯಿಸಿರುವ ವಿವಿಧ ಭಾಷೆಗಳ ಪ್ರಸಿದ್ಧ ಚಿತ್ರಗಳಿರಲಿ ಕನ್ನಡದ್ದೇ ಚಿತ್ರಗಳನ್ನು ನೋಡಿದರೂ ‘ಹಂಸಗೀತೆ’, ‘ಕನ್ನೇಶ್ವರ ರಾಮ’, ‘ಬರ’, ‘ಅವಸ್ಥೆ’, ‘ಉದ್ಭವ’, ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬೆಳದಿಂಗಳ ಬಾಲೆ’, ‘ಮತದಾನ’, ‘ಮೌನಿ’, ‘ಅನುರೂಪ’, ‘ರಾಮಾಪುರದ ರಾವಣ’, ‘ಸಿಂಹಾಸನ’, ‘ಅನ್ವೇಷಣೆ’, ‘ಮಾಲ್ಗುಡಿ ಡೇಸ್’ ಇವೆಲ್ಲಾ ಅನಂತ್ ನಾಗ್, ಕಮಲ್ ಹಾಸನರಂತಹ ಕೆಲವರಿಗೆ ಮಾತ್ರ ಸಾಧ್ಯವಿರುವಂತದ್ದು.

ಅನಂತ್ ಅವರನ್ನು ಎಷ್ಟು ವಿಭಿನ್ನವಾಗಿ ಬೇಕಿದ್ದರೂ ಬಳಸಬೇಕೆಂಬುದಕ್ಕೆ ‘ನಾನಿನ್ನ ಬಿಡಲಾರೆ’ ಚಿತ್ರ ಒಂದು ಅಪೂರ್ವ ನಿದರ್ಶನ. ‘ಬಯಲು ದಾರಿ’ ಚಿತ್ರದ ನಂತರದಲ್ಲಿ ಕನ್ನಡದ ಪ್ರಸಿದ್ಧ ನಿರ್ದೇಶಕ ಜೋಡಿ ದೊರೈ ಭಗವಾನರು ಅನಂತನಾಗ್ ಅವರನ್ನು ಗುತ್ತಿಗೆಗೆ ಹಿಡಿದಷ್ಟು ಒಂದಾದ ಮೇಲೊಂದು ಸುಂದರ ಚಿತ್ರಗಳನ್ನು ನಿರ್ಮಿಸಿದರು. ಅದರಲ್ಲೂ ಅನಂತನಾಗ್ ಲಕ್ಷ್ಮೀ ಜೋಡಿ ಅಂತೂ, ಇವರು ನಿಜ ಜೀವನದಲ್ಲಿ ಸತಿ ಪತಿಗಳು ಎಂಬ ಹೃದ್ಭಾವ ಮೂಡಿಸುವಷ್ಟು ಸುಂದರ ಪಾತ್ರಗಳಲ್ಲಿ ಸುಂದರ ಜೋಡಿಯಾಗಿ ಕಂಗೊಳಿಸಿದರು.

‘ಬೆಂಕಿಯ ಬಲೆ’, ‘ಚಂದನದ ಗೊಂಬೆ’, ‘ಇಬ್ಬನಿ ಕರಗಿತು’, ಮುದುಡಿದ ತಾವರೆ ಅರಳಿತು’, ‘ಮಕ್ಕಳಿರಲವ್ವ ಮನೆತುಂಬ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ನಾ ನಿನ್ನ ಬಿಡಲಾರೆ’, ‘ಧೈರ್ಯಲಕ್ಷ್ಮಿ’, ‘ಬಿಡುಗಡೆಯ ಬೇಡಿ’ ಮುಂತಾದ ಚಿತ್ರಗಳಲ್ಲಿ ಈ ಜೋಡಿ ಸಾಮಾನ್ಯ ಜನಜೀವನವನ್ನು ಪ್ರತಿಬಿಂಬಿಸಿದ ಪಾತ್ರಗಳು ಅವಿಸ್ಮರಣೀಯ.

‘ಅರುಣರಾಗ’, ‘ಅನುಪಮ’, ‘ಮುಳ್ಳಿನಗುಲಾಬಿ’, ‘ಹೊಸ ನೀರು’ , ‘ಬಾಡದ ಹೂ’, ‘ಜನ್ಮಜನ್ಮದ ಅನುಬಂಧ’, ಮುಂತಾದವು ಅನಂತ್ ಇತರ ನಟಿಯರೊಂದಿಗೆ ನಟಿಸಿದ ಇಂತದ್ದೇ ಮನಮುಟ್ಟುವ ಚಿತ್ರಗಳ ಸಾಲಿಗೆ ಸೇರಿದಂತಹವು.

ಒಬ್ಬ ಸುರದ್ರೂಪಿ ನಟರಾಗಿದ್ದ ಅನಂತನಾಗ್ ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಮಿಂಚಿದ್ದು, ಚಲನಚಿತ್ರರಂಗದಲ್ಲಿ ಇನ್ಯಾವುದೇ ಹೋಲಿಕೆಗೂ ಸಿಗದಷ್ಟು ಮಿಗಿಲಾದದ್ದು. ‘ಚಾಲೆಂಜ್ ಗೋಪಾಲಕೃಷ್ಣ’, ‘ಗೋಲ್ ಮಾಲ್ ರಾಧಾಕೃಷ್ಣ’, ‘ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು’, ‘ಹೆಂಡ್ತೀಗ್ಹೇಳ್ಬೇಡಿ’, ‘ಗೌರಿ ಗಣೇಶ’, ‘ಗಣೇಶ ಸುಬ್ರಮಣ್ಯ’, ‘ಮನೇಲಿ ಇಲಿ ಬೀದೀಲಿ ಹುಲಿ’, ‘ಧೈರ್ಯಲಕ್ಷ್ಮಿ’, ‘ನಾರದ ವಿಜಯ’, ‘ಹಾಸ್ಯರತ್ನ ರಾಮಕೃಷ್ಣ’, ‘ಯಾರಿಗೂ ಹೇಳ್ಬೇಡಿ’, ‘ಗಾಯತ್ರಿ ಮದುವೆ’, ‘ಇನ್ನೊಂದು ಮದುವೆ’, ‘ಯಾರಿಗೆ ಸಾಲುತ್ತೆ ಸಂಬಳ’, ‘ಉಂಡು ಹೋದ ಕೊಂಡುಹೋದ’, ‘ಉದ್ಭವ’, ‘ಹೆಂಡ್ತಿ ಬೇಕು ಹೆಂಡ್ತಿ’, ‘ಸಮಯಕ್ಕೊಂದು ಸುಳ್ಳು’ ಸೇರಿದಂತೆ ಹಲವಾರು ಚಿತ್ರಗಳನ್ನು ಈ ಪಟ್ಟಿಗೆ ಸೇರಿಸಬಹುದು. ಸದ್ಯದಲ್ಲೇ ಇಂಥಹ ನಿರೀಕ್ಷೆ ಹುಟ್ಟಿಸಿರುವ ‘ಸಕ್ಕರೆ’ ಎಂಬ ಚಿತ್ರ ಬಿಡುಗಡೆಯ ಸಮೀಪದಲ್ಲಿದೆ.

ಅನಂತ್ ನಾಗ್ ತಾವು ಅಷ್ಟೊಂದು ದೊಡ್ಡ ನಟರಾದರೂ ಇತರ ನಾಯಕರು ಪ್ರಧಾನವಾಗಿದ್ದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಲು ಎಂದೂ ಹಿಂಜರಿದವರಲ್ಲ. ರಾಜ್ ಕುಮಾರ್ ಜೊತೆಗೆ ‘ಕಾಮನಬಿಲ್ಲು’,ವಿಷ್ಣುವರ್ಧನರೊಡನೆ ‘ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’, ರವಿಚಂದ್ರನ್ ಜೊತೆ ‘ರಣಧೀರ’, ಶಾಂತಿಕ್ರಾಂತಿ’ ಇವೇ ಮುಂತಾದ ಅನಂತ್ ನಟಿಸಿದ ಅನೇಕ ಚಿತ್ರಗಳನ್ನು ಈ ಪಟ್ಟಿಯಲ್ಲಿ ಸೇರಿಸಬಹುದು. ‘ಮುಂಗಾರುಮಳೆ’, ‘ಗಾಳಿಪಟ’ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರವಹಿಸಿದ್ದರೂ ಚಿತ್ರದ ಚೌಕಟ್ಟಿನಲ್ಲಿ ಅವರು ಪ್ರಧಾನವಾಗಿ ಎದ್ದು ಕಾಣುತ್ತಾರೆ. ಭಾರತದ ಖ್ಯಾತ ಧಾರಾವಾಹಿಗಳಲ್ಲೊಂದಾದ ತಮ್ಮ ಸಹೋದರ ದಿವಂಗತ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಲ್ಲದೆ ಕನ್ನಡದಲ್ಲಿಯೂ ಕಿರುತೆರೆಯ ಹಲವಾರು ಪ್ರಸಿದ್ಧ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಅನಂತ್ ಯಾವುದೇ ಪಾತ್ರವಾದರೂ, ಎಷ್ಟೇ ಚಿಕ್ಕ ಸ್ಪೇಸ್ ಇದ್ದರೂ ಅದರ ವ್ಯಾಪ್ತಿಯನ್ನು ವಿಸ್ತೃತವಾಗಿ ಪ್ರೇಕ್ಷಕನ ಅನುಭಾವಕ್ಕೆ ತರಬಲ್ಲ ಅಸಮಾನ್ಯ ನಟರೆನಿಸಿದ್ದು , ಎಲ್ಲೇ ಇದ್ದರೋ, ಹೇಗೇ ಇದ್ದರೂ, ಯಾವುದೇ ಸಣ್ಣ ಪಾತ್ರವೇ ಇದ್ದರೂ ಯಾವುದೇ ಸೀಮೆಗಳ ಬಂಧನವಿಲ್ಲದೆ ಅನಂತರಾಗಿರುವವರು.

ರಾಜಕಾರಣದ ಬದುಕು
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ ಶಾಸಕರಾದ ಅನಂತನಾಗ್, ನಂತರ ಜೆ.ಹೆಚ್.ಪಟೇಲ್ ಅವರ ಮಂತ್ರಿಮಂಡಲದಲ್ಲಿ ಮಂತ್ರಿಗಳಾಗಿದ್ದರು.

ಕನ್ನಡ ಚಿತ್ರಗಳು
ಹಿಂದಿ ಚಿತ್ರಗಳು
ಜನಪ್ರಿಯ ಧಾರಾವಾಹಿಗಳು
ಪ್ರಶಸ್ತಿ – ಪುರಸ್ಕಾರ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

ಅತ್ಯುತ್ತಮ ನಟ – ಮಿಂಚಿನ ಓಟ (1979-80)
ಅತ್ಯುತ್ತಮ ನಟ – ಹೊಸ ನೀರು (1985-86)
ಅತ್ಯುತ್ತಮ ನಟ – ಅವಸ್ಥೆ (1987-88)
ಅತ್ಯುತ್ತಮ ನಟ – ಗಂಗವ್ವ ಗಂಗಾಮಾಯಿ (1994-95)
ಎರಡನೆಯ ಅತ್ಯುತ್ತಮ ಚಲನಚಿತ್ರ – ಮಿಂಚಿನ ಓಟ (1979-80) [ಶಂಕರ ನಾಗ್ ಜೊತೆ]
ವಿಷ್ಣುವರ್ಧನ ಪ್ರಶಸ್ತಿ (2010)
ಫಿಲಂಫೇರ್ ಅವಾರ್ಡ ಕನ್ನಡ

ಅತ್ಯುತ್ತಮ ನಟ – ನಾ ನಿನ್ನ ಬಿಡಲಾರೆ (1979)
ಅತ್ಯುತ್ತಮ ನಟ – ಬರ (1982)
ಅತ್ಯುತ್ತಮ ನಟ – ಹೆಂಡ್ತಿಹೇಳ್ಬೇಡಿ (1989)
ಅತ್ಯುತ್ತಮ ನಟ – ಉದ್ಭವ (1990)
ಅತ್ಯುತ್ತಮ ನಟ – ಗೌರಿ ಗಣೇಶ (1991)
ಅತ್ಯುತ್ತಮ ನಟ – ಗೋದಿ ಬಣ್ಣ ಸಾಧಾರಣ ಮೈಕಟ್ಟು (2016)
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ – “ನನ್ನ ತಮ್ಮ ಶಂಕರ”
ರಾಜ್ಯೋತ್ಸವ ಪ್ರಶಸ್ತಿ (2007)

ಮಾಹಿತಿ: ಕಲಾವಿದರು


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading