ಕರುನಾಡ ಕಹಿ ದಿನ: 29 / 10 / 2021 – ಪುನೀತ್ ರಾಜಕುಮಾರ್ ನಿಧನ
ಹೃದಯಾಘಾತದಿಂದ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತಿದ್ದರು.

ಉತ್ತರ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯ ಮತ್ತು ಇಲ್ಲಿನ ಜನರ ಪ್ರೀತಿಗೆ ಮನಸೋತ ಪುನೀತ್ ರಾಜಕುಮಾರ್ ತಮ್ಮ ಸಾವಿನ ಎರಡು ದಿನ ಮೊದಲು ಟ್ವಿಟರ್ ಪೇಜ್ನಲ್ಲಿ ಜಿಲ್ಲೆಯ ಬಗ್ಗೆ ಕೊಂಡಾಡಿ ತಮ್ಮ ಸಾಕ್ಷ ಚಿತ್ರ ಬಿಡುಗಡೆ ಬಗ್ಗೆ ಬರೆದುಕೊಂಡಿದ್ದರು. ದುರ್ದೈವವೆಂದರೆ ಶುಕ್ರವಾರ ಅವರು ಹೃದಯಾಘಾತದಿಂದ ಅಗಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯದ ಬಗ್ಗೆಯೇ ತಾವು ಸಿದ್ಧಪಡಿಸಿದ ಸಾಕ್ಷ್ಯ ಚಿತ್ರಕ್ಕೆ ಕಳೆದ ಫೆಬ್ರವರಿಯಲ್ಲಿ ಜಿಲ್ಲೆಯ ಜೊಯಿಡಾ, ಮುರ್ಡೇಶ್ವರ ಮತ್ತಿತರ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಕೆಲವು ದಿನಗಳ ಕಾಲ ಜೊಯಿಡಾದ ಕಾಡುಗಳಲ್ಲೇ ಚಿತ್ರೀಕರಣ ನಡೆದಿತ್ತು ಆಗ ಅಲ್ಲಿಯ ಪಾತಗುಡಿ, ಡೇರಿಯಾದಲ್ಲಿ ಉಳಿದು ರಾಜಕುಮಾರ್ ಅಭಿಮಾನಿಯಾಗಿದ್ದ ಅಜ್ಜಿ ಕರಿಯವ್ವ ಜೊತೆ ಪೊಟೋ ಸಹ ತೆಗೆದುಕೊಂಡಿದ್ದು ಸುದ್ದಿಯಾಗಿತ್ತು. ಪಾತಾಗುಡಿಯಲ್ಲಿ ನೆಲದ ಮೇಲೆಯೇ ಕುಳಿತು ಬಾಳೆ ಎಲೆಯಲ್ಲಿ ಊಟ ಮಾಡಿ ತಮ್ಮ ಸರಳತೆ ಮೆರೆದಿದ್ದರು. ಅಲ್ಲದೇ ಕಾಟೇಗಾಳಿ, ಪಾತಾಗುಡಿ ಗುಡ್ಡ ಏರಿ, ಡಿಗ್ಗಿಯ ಉಗಮ ಸ್ಥಾನದ ಚಾಪಲಾ ದೇವಿಗೂ ಪೂಜೆ ಸಲ್ಲಿಸಿದ್ದರು.

ಗುರುವಾರದಂದು ಮುರುಡೇಶ್ವರದಲ್ಲಿ ಸ್ಕೂಬಾ ಡೈ ಮಾಡಿದ ಹಾಗೂ ಡಾಕ್ಯುಮೆಂಟರಿ ಚಿತ್ರೀಕರಣದ ಬಿಡುಗಡೆಯ ಪೋಸ್ಟ್ ಅನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. “ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ” ಎಂದು ಹೇಳಿ ನೇತ್ರಾಣಿ ಸ್ಕ್ಯೂಬಾ ಡೈವಿಂಗ್ನ ಘೋಟೋ ಒಂದನ್ನು ಹಂಚಿಕೊಂಡಿದ್ದರು. ಅಲ್ಲದೇ ನವೆಂಬರ್ 1ರಂದು ಈ ಡಾಕ್ಯುಮೆಂಟರಿ ಬಿಡುಗಡೆ ಬಗ್ಗೆ ತಿಳಿಸಿದ್ದರು. ಆದರೆ ಉತ್ತರ ಕನ್ನಡ ನಿಸರ್ಗ ಸೌಂದರ್ಯ ಮೆಚ್ಚಿನ ಪ್ರಿಯ ಅಪ್ಪು ಇನ್ನಿಲ್ಲ.

ತಮ್ಮ ಪಿಆರ್ಕೆ ಪ್ರೊಡಕ್ಷನ್ಸ್ ಹಾಗೂ ಮಡ್ ಸ್ಕಿಪ್ಪರ್ಸ್ ಮೀಡಿಯಾಹೌಸ್ನಿಂದ ತಯಾರಾಗಿದ್ದ ಸಾಕ್ಷ್ಯ ಚಿತ್ರದ ಬಗ್ಗೆ ವಿವರವಾಗಿ ಪುನಿತ್ ವಿವರಿಸಿರಲಿಲ್ಲ. ವಿಷಾದವೆಂದರೆ ದುರಂತ ಎನ್ನುವಂತೆ ಡಾಕ್ಯುಮೆಂಟರಿ ಬಿಡುಗಡೆಗೂ ಮುನ್ನ ಪುನೀತ್ ಅಗಲಿದ್ದಾರೆ. ಅವರು ಇಷ್ಟಪಡುವ ಉತ್ತರ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯದ ಸಾಕ್ಷ್ಯ ಚಿತ್ರದ ಬಗ್ಗೆ ಫೇಸ್ಬುಕ್ ಪೋಸ್ಟ್ ಅವರ ಜೀವನದ ಕೊನೆಯ ಕ್ಷಣದ ಪೋಸ್ಟ್ ಆಗಿದೆ.

ತಂದೆ ಕಾಲದಿಂದಲೂ ಜಿಲ್ಲೆಯ ನಂಟು: ಉತ್ತರ ಕನ್ನಡವೆಂದರೆ ಪುನೀತ್ ರಾಜಕುಮಾರ್ಗೆ ಅಚ್ಚುಮೆಚ್ಚು. ಅವರ ತಂದೆಯವರು ಉತ್ತರ ಕನ್ನಡದವರೇ ಆಗಿರುವ ಶ೦ಕರನಾಗ ನಿರ್ದೇಶನದ ಒಂದು ಮುತ್ತಿನ ಕಥೆ ಕುಮಟಾ ತದಡಿ ಬಳಿ ಚಿತ್ರೀಕರಣವಾಗುತ್ತಿದ್ದಾಗ ಪುನೀತ್ ಸಹ ಅವರ ಜೊತೆ ಬಂದಿದ್ದರು. ಆಗಲೇ ತಾವು ಉತ್ತರ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯದ ಬಗ್ಗೆ ಮಾರು ಹೋಗಿರುವುದಾಗಿ ಸ೦ದರ್ಶನವೊ೦ದರಲ್ಲಿ ಹೇಳಿಕೊಂಡಿದ್ದರು. ಪುನೀತ್ ರಾಜ್ಗೆ ಉತ್ತರ ಕನ್ನಡವೆಂದರೆ ಬಹಳ ಪ್ರೀತಿ. ಇಲ್ಲಿನ ನಿಸರ್ಗ ಸೌಂದರ್ಯ, ಕಡಲತೀರ, ಜಲಪಾತಗಳ ಸೊಬಗನ್ನು ಇಷ್ಟಪಡುತ್ತಿದ್ದರು.



ನೇತ್ರಾಣಿ ಸ್ಕೂಬಾ ಡೈವಿಂಗ್, ಗೋಕರ್ಣದ ಬ್ಯಾಕ್ ಫ್ಲಿಪ್: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಳೆದ ಫೆಬ್ರುವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಮತ್ತು ಮುರುಡೇಶ್ವರಕ್ಕೆ ಆಗಮಿಸಿದ್ದರು. ಅಲ್ಲದೆ ಗೋಕರ್ಣದ ಕಡಲ ತೀರದಲ್ಲೂ ವಿಹಾರಿಸಿದ್ದರು. ಮುರುಡೇಶ್ವರದಲ್ಲಿ ನೇತ್ರಾಣಿ ಅಡ್ವೆಂಚರ್ ಸಹಕಾರದೊಂದಿಗೆ ನೇತ್ರಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದರು. ಆ ಬಗ್ಗೆ ವಿಡಿಯೋವನ್ನು ಸಹ ಹಂಚಿಕೊಂಡಿದ್ದರು. ಗೋಕರ್ಣದ ಕಡಲ ತೀರದಲ್ಲಿ ಬೆಳ್ಳಂಬೆಳಿಗ್ಗೆ ಬ್ಯಾಕ್ ಫ್ಲಿಪ್ ಡಾನ್ಸ್ ಮಾಡಿ ಗಮನಸೆಳೆದಿದ್ದರು. ಜೋಯಿಡಾದ ಕಾಡಿನ ಚಿತ್ರೀಕರಣ ವೇಳೆ ಪಾತಗುಡಿಯಲ್ಲಿ ಹಳ್ಳಿಗರ ಜೊತೆ ಬೆರೆತಿದ್ದರು. ಕಳೆದ ಜೂನ್ ೬ ರಂದು ಕುಮಟಾಕ್ಕೆ ಬಂದಿದ್ದ ಪುನೀತ್ ಆತನ ಮದುವೆಯಲ್ಲಿ ಪಾಲ್ಗೊಂಡಿದ್ದರು. ಗೋಕರ್ಣಕ್ಕೆ ಬಂದಿದ್ದ ವೇಳೆ ಸಾಮಾನ್ಯರಂತೆ ಕಡಲತೀರದಲ್ಲಿ ಅಡ್ಡಾಡಿದ್ದರು. ತೀರದ ಹೋಟೆಲ್ ಗಳಲ್ಲಿ ಖಾದ್ಯಗಳನ್ನು ಸವಿದಿದ್ದರು. ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೂ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ್ದರು. ಇದೀಗ ಪುನೀತ್ ನೆನಪಷ್ಟೇ.
ಮಾಹಿತಿ ಮೂಲ: ಕರಾವಳಿ ಮುಂಜಾವು ದಿನಪತ್ರಿಕೆ


Leave a Reply