ಉತ್ತರ ಕನ್ನಡದ ಸಿದ್ದಾಪುರದಲ್ಲಿದೆ‌ ಕನ್ನಡಾಂಬೆ ಭುವನೇಶ್ವರಿ ದೇವಿಯ ಮಂದಿರ

Posted by

·

ಶ್ರೀ ಭುವನೇಶ್ವರಿ ದೇವಿ

ಹಚ್ಚ ಹಸಿರಿನಿಂದ ಆವೃತ್ತವಾಗಿರುವ ಎತ್ತರದ ಗಿರಿ ಶ್ರೇಣಿಯ ಪ್ರದೇಶದಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿ ನೆಲೆಸಿರುವ ಶ್ರದ್ಧಾ ಭಕ್ತಿಯ ತಾಣ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿದೆ. ಸಿದ್ದಾಪುರ ಪಟ್ಟಣದಿಂದ ಕುಮಟಾ ಮಾರ್ಗದಲ್ಲಿ ಕೇವಲ ೮ ಕಿ.ಮಿ. ಕ್ರಮಿಸಿದರೆ ಕನ್ನಡಾಂಬೆಯ ದೇವಾಲಯ ಕಾಣಸಿಗುತ್ತದೆ. ೩೦೦ ಅಡಿ ಎತ್ತರದ ಭುವನಗಿರಿಯ ಮೇಲಿರುವ ಮೂರು ಶತಮಾನಗಳಷ್ಟು ಹಳೆಯದಾದ ದೇವಾಲಯವನ್ನು ೩೫೦ ಮೆಟ್ಟಿಲುಗಳನ್ನು ಏರಿದ ನಂತರ ತಲುಪಬಹುದಾಗಿತ್ತು. ಕೆಲ ದಶಕಗಳ ಹಿಂದೆ ದೇವಾಲಯದ ಬಯಲಿನವರೆಗೆ ರಸ್ತೆ ನಿರ್ಮಿಸಿರುವುದರಿಂದ ಈಗ ೧೨೫ ಮೆಟ್ಟಿಲುಗಳನ್ನು ಹೊಂದಿರುವುದರಿಂದ ಭಕ್ತಾದಿಗಳಿಗೆ ಅನುಕೂಲವಾಗಿದೆ. ರಸ್ತೆ ಪಕ್ಕದಲ್ಲಿಯೇ ವಿಶಾಲವಾದ ಪುಷ್ಕರಣಿ ಇದೆ.

ಭುವನಗಿರಿ ಕನ್ನಡಾಂಬೆ ದೇವಿ ದೇವಸ್ಥಾನದ ಪಕ್ಷಿನೋಟ

ಮಲೆನಾಡಿನ ಅಚ್ಚಹಸಿರಿನಿಂದ ಕೂಡಿರುವ ಈ ಮಂದಿರಕ್ಕೆ ಐತಿಹಾಸಿಕ ಹಿನ್ನೆಲೆಯು ಇದೆ. ವಿಜಯನಗರದ ಅರಸರ ಸಾಮಂತರಾಗಿದ್ದ ಬಿಳಗಿಯ ರಾಜರ ಪರಂಪರೆಯ ಕೊನೆಯ ಅರಸ ಬಸವೇಂದ್ರ ೧೬೯೨ ರಲ್ಲಿ ಭುವನಗಿರಿಯ ಬೆಟ್ಟದ ಮೇಲೆ ದೇಗುಲವನ್ನು ಹಾಗೂ ಬೆಟ್ಟದ ಕೆಳಗೆ ವಿಶಾಲವಾದ ಪುಷ್ಕರಣಿಯನ್ನು‌ ನಿರ್ಮಿಸಿದ್ದರು ಎಂದು‌ ಇತಿಹಾಸ ಹೇಳುತ್ತದೆ. ‌‌ಬಿಳಗಿ ಸಾಮ್ರಾಜ್ಯವು ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ, ಉಡುಪಿ ಜಿಲ್ಲೆಯ ಗಂಗೊಳ್ಳಿ ನದಿಯವರೆಗೆ ಹರಡಿತ್ತು. ಬಿಳಗಿಯ ಆಡಳಿತಗಾರರು ಕನ್ನಡ ಭಾಷೆಯ ಧೀಮಂತ ಮತ್ತು ಮಹಾನ್ ‌ಅಭಿಮಾನಿಗಳಾಗಿದ್ದರಿಂದ ಕನ್ನಡ ತಾಯಿ ಭುವನೇಶ್ವರಿ ದೇವಿಗೆ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಎಂದು ಪುರಾವೆಗಳು ಹೇಳುತ್ತವೆ. ಈ ಪ್ರದೇಶವು ಹವ್ಯಕ ಸಮುದಾಯಕ್ಕೆ ಸೇರಿದ ಜನರಿಂದಾಗಿರುವುದರಿಂದ ದೇವಸ್ಥಾನದ ಆಡಳಿತವನ್ನು ಅವರೆ ನೋಡಿಕೊಳ್ಳುತ್ತಾರೆ.

ಶ್ರೀ ಭುವನೇಶ್ವರಿ ದೇವಿ ದೇವಸ್ಥಾನ, ಭುವನಗಿರಿ, ಸಿದ್ದಾಪುರ

ಭುವನೇಶ್ವರಿ ಮಾತೆಯ ದೇಗುಲವನ್ನು ಅತ್ಯಂತ ಪುರಾತನ ಮಾದರಿಯ ಶಿಲೆಗಳಿಂದ ನಿರ್ಮಿಸಲಾಗಿದ್ದು, ದೇವಾಲಯದ ಅಕ್ಕಪಕ್ಕದಲ್ಲಿರುವ ನಂದಿಶ್ವರ, ರಂಗನಾಥ ಮುಂತಾದ ವಿಗ್ರಹಗಳು ಸೂಕ್ಷ್ಮ ಕೆತ್ತನೆಗೆ ಸಾಕ್ಷಿಗಳಾಗಿದ್ದು ಆಕರ್ಷಕವಾಗಿದೆ. ಮಾತೆಯ ಎದುರಿಗಿರುವ ಸಿಂಹದ ಮೂರ್ತಿಯು ಅತಿಸೂಕ್ಷ್ಮ ಕೆತ್ತನೆಯಿಂದ ಕಣ್ಮನ ಸೆಳೆಯುತ್ತದೆ. ದೇವಾಲಯದ ಚಾವಣಿಯು ಸಹ ಆಕರ್ಷಕವಾಗಿದೆ.

ಶ್ರೀ ಭುವನೇಶ್ವರಿ ದೇವಿ ದೇವಸ್ಥಾನ, ಭುವನಗಿರಿ, ಸಿದ್ದಾಪುರ

ಇಲ್ಲಿಯ ಹಿರಿಯರ ಪ್ರಕಾರ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ವಿಜಯನಗರದ ಅರಸರು ಪ್ರತಿಷ್ಠಾಪಿಸಿರುವ ಭುವನೇಶ್ವರಿ ದೇವಿಯ ವಿಗ್ರಹವಿದ್ದರೂ ಭುವನಗಿರಿಯಲ್ಲಿ ಭುವನೇಶ್ವರಿ ಮಾತೆ ತನ್ನದೇ ಆದ ದೇವಾಲಯವನ್ನು ಹೊಂದಿರುವ ರಾಜ್ಯದ ಏಕೈಕ ಸ್ಥಳವಾಗಿದೆ.

ಭುವನೇಶ್ವರಿ ದೇವಿಯನ್ನು ಕನ್ನಡ ಮಾತೆಯೆಂದು ೪ನೇ ಶತಮಾನದಲ್ಲಿ ಮೊದಲ ಕನ್ನಡ ಸಾಮ್ರಾಜ್ಯ ಕದಂಬರು ಕಲ್ಪಿಸಿದ್ದರು. ಈಗಲೂ ಕನ್ನಡ ರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಭುವನೇಶ್ವರಿ ದೇವಿಗೆ ಅಗ್ರ ಪೂಜೆ. ಭುವನೇಶ್ವರಿಗೆ ಇರುವ ದೇವಾಲಯಗಳ ಸಂಖ್ಯೆ ಕಡಿಮೆಯಿದ್ದರೂ ಕೆಲವು ದೇವಾಲಯಗಳು ಐತಿಹಾಸಿಕ ಹಿನ್ನೆಲೆ ಹೊಂದಿದವುಗಳಾಗಿವೆ. ಈ ರೀತಿ ಐತಿಹಾಸಿಕ ಹಿನ್ನೆಲೆಯುಳ್ಳ ಕನ್ನಡಾಂಬೆ ಭುವನೇಶ್ವರಿ ದೇವಿಯ ದೇಗುಲ ನಮ್ಮ ಉತ್ತರ ಕನ್ನಡ ಜಿಲ್ಲೆಯ ‌ಸಿದ್ದಾಪುರದಲ್ಲಿರುವುದು ನಮಗೆ‌ ಹೆಮ್ಮೆಯ ಸಂಗತಿಯಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಒಲಿದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಕನ್ನಡಿಗರಾದ ನಮ್ಮ ಆದ್ಯ ಕರ್ತವ್ಯವಾಗಿದೆ.

ರಚನೆ: ಅಕ್ಷತಾ ಜಗದೀಶ್ (ಸಮಯಾ)

Video credits- roving_kannadiga


Discover more from Suggi Sampada

Subscribe to get the latest posts sent to your email.

3 responses to “ಉತ್ತರ ಕನ್ನಡದ ಸಿದ್ದಾಪುರದಲ್ಲಿದೆ‌ ಕನ್ನಡಾಂಬೆ ಭುವನೇಶ್ವರಿ ದೇವಿಯ ಮಂದಿರ”
  1. Prabhakar Kamble

    Very much informative and good narrative about Lord Ganapathi ….keep your practising….

  2. Balakrishna Devanamane, Belambara

    ಅಸಂಖ್ಯಾತ ದೇವರುಗಳನ್ನು ಪೂಜಿಸುವ ನಮಗೆ ಕನ್ನಡಾಂಬೆ ಶ್ರೀ ಭುವನೇಶ್ವರಿ ಮಾತೆ ದೇವಸ್ಥಾನ ಇರುವುದು ಅಚ್ಚರಿಯ ವಿಷಯವೇ… ಲೇಖಕಿ ಅಕ್ಷತಾ ಜಗದೀಶ ರವರು ಬರೆದಿರುವಂತೆ ರಾಜ್ಯದ ಏಕೈಕ ಶ್ರೀ ಭುವನೇಶ್ವರಿ ಮಾತೆ ದೇವಾಲಯ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿರುವುದು ನಮಗೆಲ್ಲ ಹೆಮ್ಮೆಯ ವಿಚಾರ. ಸಂಕ್ಷಿಪ್ತವಾಗಿ ಐತಿಹಾಸಿಕ ಹಿನ್ನೆಲೆಯೊಂದಿಗೆ ವಿವರಿಸಿರುವುದು ಉತ್ತಮವಾಗಿದೆ. ದೇವಾಲಯದ ಬಗ್ಗೆ ಪರಿಚಯಿಸಿರುವುದು ಹೆಚ್ಚಿನ ಜನರಿಗೆ ಮಾಹಿತಿ ತಿಳಿದುಕೊಳ್ಳಲು ಮತ್ತು ಭೇಟಿ ನೀಡಲು ಸಹಾಯಕವಾಗಿದೆ. ಲೇಖಕಿಯವರಿಗೆ ಧನ್ಯವಾದಗಳು.. 🙏

  3. timetravelsecretlyc1af075b81

    ಐತಿಹಾಸಿಕ ಹಿನ್ನೇಲೆಯನ್ನು ಹೊಂದಿರುವ ಶ್ರೀ ಭುವನೇಶ್ವರಿಯ ದೇವಾಲಯದ ಕುರಿತಾಗಿ ಲೇಖಕರು ಸುಗ್ಗಿ ಸಂಪದದ ಮುಖಪುಟದಲ್ಲಿ ಒದಗಿಸಿರುವ ಮಾಹಿತಿಯು ತುಂಬಾ ಉತ್ತಮವಾಗಿ ಮೂಡಿಬಂದಿದೆ. ಕರ್ನಾಟಕದ ಮೂಲೆಮೂಲೆಗಳಲ್ಲಿ ವಾಸಿಸುವ ಎಲ್ಲ ಕನ್ನಡಿಗರಿಗೆ ಈ ಮಾಹಿತಿಯು ಉಪಯುಕ್ತವಾದುದು, ಲೇಖನವನ್ನು ಒದಿದ ಮೇಲೆ ಈ ಭುವನೇಶ್ವರಿಯ ದೇವಾಲಯಕ್ಕೊಮ್ಮೆ ಬೆಟ್ಟಿಕೊಡಬೇಕೆನ್ನುವ ಭಾವ ಕನ್ನಡಿಗರಲ್ಲಿ ತುಂಬಿ ಬರುತ್ತದೆ. ಲೇಖಕರಿಗೆ ತುಂಬು ಹೃದಯದ ಧನ್ಯವಾದಗಳು.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading