ಮೊಳಗಲಿ ಎಲ್ಲೆಡೆ ಕನ್ನಡ ಕಹಳೆ
ಕರುನಾಡಿನ ಮೂಲೆಮೂಲೆಯಲಿ..
ನಮ್ಮೆಲ್ಲರ ಉಸಿರು ಕನ್ನಡ ಎನುತಲಿ
ಎಳೆಯುವ ತೇರನು ಹರುಷದಲಿ.
ಮಾತಲಿ ಮುತ್ತು ಕನ್ನಡ ಗತ್ತಿಗೆ
ಮಧುರ ಭಾವದ ಸೆಳೆತವಿದೆ..
ಮೈತ್ರಿಯ ಬಯಸಿ ತನ್ನೆಡೆ ಬರಲು
ಕರಪಿಡಿದು ಪೊರೆವ ಪ್ರೀತಿಯಿದೆ.
ಸಹಸ್ರಾರು ವರುಷ ಇತಿಹಾಸದಿ ಮಿಂಚಿದೆ
ಕನ್ನಡ ಲಿಪಿಯ ಸಿರಿತನವು..
ಸಾಹಿತ್ಯ ಸಂಸ್ಕೃತಿ ಜಗದಲಿ ಬೆಳಗಲು
ಕರುನಾಡಿನ ಜನತೆಯ ಹಿರಿಗುಣವು.
ಕನ್ನಡ ಮಣ್ಣಿನ ಹೊನ್ನಿನ ಬೀಡು
ನಿಸರ್ಗ ಸಿರಿಯಾ ಆಗರವು..
ನಾಡಿನ ತುಂಬಾ ಹರಿದಿವೆ ನದಿಗಳು
ಎಲ್ಲೆಡೆ ಹಸಿರಿನ ಹಂದರವು.
ಸಾಹಿತ್ಯ ಕ್ಷೇತ್ರದಿ ಕನ್ನಡ ಕೀರ್ತಿಯು
ರಾಷ್ಟ್ರದ ಗಮನವ ಸೆಳೆಯುತ್ತಿದೆ..
ಶಾಂತಿಯ ಮಂತ್ರಕೆ ಜಗವೇ ಸೋತು
ಕನ್ನಡಿಗರ ಕೀರ್ತಿಯು ಮಿನುಗುತ್ತಿದೆ.
ಶಿಲ್ಪ ಕಲೆಯಲಿ ವಿಶ್ವದ ಗಮನವ
ಸೆಳೆದಿಹ ಹೆಮ್ಮೆಯ ಸಿರಿನಾಡು..
ಸಕಲ ಧರ್ಮಗಳು ಒಂದೆಡೆ ಬೆರೆತು
ಭಾವೈಕ್ಯತೆ ಸಾರಿದ ಹೊನ್ನಾಡು.
ಸ್ವರ್ಗ ಸುಖದ ಐಸಿರಿ ನಾಡು
ಕರುನಾಡು ನಮ್ಮೂಸಿರು ಎನ್ನುತಲಿ..
ಕನ್ನಡ ಮಾತೆಯ ಕೀರ್ತಿ ಜ್ಯೋತಿಯ
ಮೆರೆಸುವ ಕನ್ನಡ ಉಸಿರೆನ್ನುತಲಿ.
ರಚನೆ:
ಸಾತುಗೌಡ ಬಡಗೇರಿ.
ಮು:ಪೋ: ಕೇಣಿ.
ತಾಲೂಕ:ಅಂಕೋಲಾ.581 314.
ಜಿಲ್ಲಾ:ಉತ್ತರ ಕನ್ನಡ.
9008918842


Leave a Reply