ಸಂಗೀತ, ಶಿಲ್ಪಕಲೆಗಳ ನೆಲೆ. ಸಂಗೀತಪುರ ಎಂಬ ಹೆಸರನ್ನು ಪಡೆದ ಸ್ಥಳ. 16ನೇ ಶತಮಾನದಲ್ಲಿ ಇಲ್ಲಿ ಬಸದಿಗಳು ನಿರ್ಮಾಣಗೊಂಡವು. ಈಗ ಒಂದು ಸಾಮಾನ್ಯ ಹಳ್ಳಿ. ಭಟ್ಕಳ-ಸಾಗರ ರಸ್ತೆಯಲ್ಲಿ ಭಟ್ಕಳದಿಂದ 16 ಕಿ.ಮೀ. ದೂರದಲ್ಲಿ ಹಾಡುವಳ್ಳಿ ಇದೆ.

ಸಾಳ್ವರು ಇದನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದರು. ಇಂದು ಇಲ್ಲಿ ಗತಕಾಲದ ಕುರುಹುಗಳಾಗಿ 24 ತೀರ್ಥಂಕರರಿರುವ ಜೈನ ಬಸದಿಗಳು ಆಕರ್ಷಣೆಯಾಗಿ ಉಳಿದುಕೊಂಡಿದೆ. ಈ ಮೂರ್ತಿಗಳು ಕಾಲವನ್ನು ಲೆಕ್ಕಿಸದೇ ನಿರ್ಲಿಪ್ತವಾಗಿ, ಧ್ಯಾನಾಸಕ್ತವಾಗಿ ಕುಳಿತಿರುವಂತೆ ಭಾಸವಾಗುತ್ತವೆ. ಸುಮಾರು 500 ವರ್ಷಗಳ ಹಿಂದೆ ಇದು ಪ್ರತಿಷ್ಠಿತ ನಗರವಾಗಿತ್ತು. ವ್ಯಾಕರಣ ಗ್ರಂಥ ಬರೆದ ಗುರು ಭಟ್ಟಾಕಳಂಕ ಇಲ್ಲಿ ವಾಸವಾಗಿದ್ದ. ಅಂಕನಕಟ್ಟೆಯಲ್ಲಿ ರಾಣಿಯ ಅರಮನೆ ಇತ್ತು ಎಂಬ ಪ್ರತೀತಿ ಇದೆ.

ಚಂದ್ರಗಿರಿಯ ಮೇಲೆ ಇರುವ ಚಂದ್ರನಾಥ ಬಸದಿ ಆಕರ್ಷಕವಾಗಿದೆ. ಅಲ್ಲದೇ ಚಂದ್ರಗಿರಿ, ಇಂದ್ರಗಿರಿಯ ಬೆಟ್ಟಗಳ ಸೌಂದರ್ಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯ ಸ್ಥಳವಾಗಿದೆ. ಜೈನಕೇರಿ ಎಂಬಲ್ಲಿ ಕಾಳುಮೆಣಸಿನ ಸಂಗ್ರಹಣೆಗಾಗಿ 900 ಬಾವಿಗಳನ್ನು ಚೆನ್ನಭೈರಾದೇವಿ ತನ್ನ ಆಳ್ವಿಕೆಯಲ್ಲಿ ನಿರ್ಮಿಸಿದ್ದಳು ಎಂಬುದಕ್ಕೆ ಆಧಾರಗಳು ಇವೆ. ಇಂದಿಗೂ ಕೆಲವು ಬಾವಿಗಳನ್ನು ಕಾಣಬಹುದಾಗಿದೆ ಮತ್ತು ಈಗ ಅವು ಕುರುಹುಗಳಾಗಿ ಪರಿವರ್ತನೆಗೊಂಡಿವೆ. ಹಾಡುವಳ್ಳಿ ಸುತ್ತಲೂ ಅಷ್ಟ ದಿಕ್ಪಾಲಕರಂತೆ ಎಂಟು ಮೂರ್ತಿಗಳು ಗಾಳಿ, ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೆ ಕುಳಿತಿವೆ. ಈ ಹಳ್ಳಿಯನ್ನು ಕಂಡಾಗ ಗತಕಾಲದ ಇತಿಹಾಸಗಳ ಪುಟಗಳು ತೆರೆದುಕೊಳ್ಳುತ್ತಾ ಸಾಗುತ್ತವೆ.



ಬೆಂಗಳೂರಿನಿಂದ 440 ಕಿ.ಮೀ. ದೂರ ಇದೆ. ಭಟ್ಕಳದಿಂದ 16 ಕೆ.ಮೀ. ದೂರದಲ್ಲಿದೆ. ಭಟ್ಕಳ – ಕೋಗಾರ – ಸಾಗರ ರಸ್ತೆಯಲ್ಲಿ ಹೋಗಬೇಕು.


Leave a Reply