ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಹೇಳುವ ಗುಣವಂತೆಯ ಶಾಸನ ತುಳುಭಾಷೆಯ ಶಾಸನ ಅಲ್ಲ!

Posted by

·

ಪ್ರಜಾವಾಣಿ – ತುಳು ಲಿಪಿಯ ದೊಡ್ಡ ಶಾಸನ ಪತ್ತೆ | ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಹೇಳುವ ಗುಣವಂತೆಯ ಶಾಸನ ತುಳುಭಾಷೆಯ ಶಾಸನ ಅಲ್ಲ.
ಅದು ತಿಗಳಾರಿ ಲಿಪಿಯಲ್ಲಿರುವ ಸಂಸ್ಕೃತ ಮತ್ತು ಕನ್ನಡದ ದ್ವಿಭಾಷಾ ಶಾಸನವಾಗಿದೆ.

ಉಡುಪಿಯ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಭಟ್ಕಳ ಸಮೀಪದ ಗುಣವಂತೆಯ ಶಂಭುಲಿಂಗೇಶ್ವರ ದೇಗುಲದ ಹೊರಾಂಗಣದಲ್ಲಿ ತುಳು ಭಾಷೆಯ ದೊಡ್ಡ ಶಾಸನ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಶಾಸನದ ಉದ್ದಗಲಗಳ ಅಳತೆ ತಿಳಿಸಿರುವ ಅವರು ಶಾಸನದ ಕಾಲ, ಯಾವ ರಾಜವಂಶದ ಯಾವ ರಾಜನ ಶಾಸನ, ಶಾಸನದ ವಿಷಯವಸ್ತು ಏನು ಇತ್ಯಾದಿ ವಿವರಗಳನ್ನು ತಿಳಿಸಿಲ್ಲ. ಶಾಸನವು ತುಳು ಲಿಪಿಯಲ್ಲಿ ಮತ್ತು ಕನ್ನಡ ಭಾಷೆಯಲ್ಲಿದೆ ಎಂದು ತಿಳಿಸಿದ್ದಾರೆ.

ವಾಸ್ತವವಾಗಿ ಈ ಶಾಸನ ತಿಗಳಾರಿ ಲಿಪಿಯಲ್ಲಿರುವ ಸಂಸ್ಕೃತ ಮತ್ತು ಕನ್ನಡದ ದ್ವಿಭಾಷಾ ಶಾಸನವಾಗಿದೆ. ಈ ಶಾಸನವನ್ನು ಡಾ. ಎಚ್. ಆರ್. ರಘುನಾಥ ಭಟ್ಟ ಅವರು ಮೊದಲಿಗೆ ಅಧ್ಯಯನಮಾಡಿ ಇದು ತಿಗಳಾರಿ ಶಾಸನ ಎಂದು ತಿಳಿಸಿದ್ದಾರೆ. 1991ರಲ್ಲಿ Journal of the Epigraphical Society of India ( Bharatiya Purabhilekha Patrika) Vol 17 ರಲ್ಲಿ “A Tigalari Inscription From Gunavante” ಎನ್ನುವ ಶೀರ್ಷಿಕೆಯಲ್ಲಿ ಪ್ರಬಂಧವನ್ನು ಪ್ರಕಟಿಸಿ ಶಾಸನವನ್ನು ಸವಿಸ್ತಾರವಾಗಿ ಚರ್ಚಿಸಿದ್ದಾರೆ.

ಗುಣವಂತೆಯ ಶಂಭುಲಿಂಗೇಶ್ವರ (ಗುಣವಂತೇಶ್ವರ) ದೇವಾಲಯದ ಬಳಿಯಿರುವ ತಿಗಳಾರಿ ಲಿಪಿಯ ಶಾಸನ ಕನ್ನಡ ಭಾಷೆಯಲ್ಲಿದೆ. ಇದು ವಿಜಯನಗರದ ವೀರ ಹರಿಹರರಾಯನ ಮಗ ವೀರ ಪ್ರತಾಪದೇವರಾಯನು ವಿಜಯ ನಗರ ಸಾಮ್ರಾಜ್ಯವನ್ನು ಆಳುತ್ತಿದ್ದಾಗ ಇಚ್ಚಪ್ಪ ಒಡೆಯನು ಪುರಂಧರಪುರಿ ಶ್ರೀಪಾದರ ಶಿಷ್ಯ ಮಹೇಂದ್ರಪುರಿ ಶ್ರೀಪಾದರಿಗೆ ಭೂಮಿ ಹಾಗೂ ಹಣ ದಾನ ನೀಡಿದ ವಿಷಯ ತಿಳಿಸುತ್ತದೆ.

ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಈ ತಿಗಳಾರಿ ಶಾಸನವನ್ನು ತುಳು ಶಾಸನ ಎಂದು ಯಾಕೆ ಹೇಳುತ್ತಾರೆ ಎನ್ನುವುದಕ್ಕೆ ಅವರ ವರದಿಯ “ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ತುಳು ಶಾಸನಗಳ, ಹಸ್ತಪ್ರತಿಗಳ ಐತಿಹಾಸಿಕ ಆಕರಗಳೂ ಅವಶ್ಯ”. ಈ ಸಾಲು ಗಮನಿಸುವಂತದ್ದು. ತುಳು ಭಾಷೆಯ ಅನುಕೂಲಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ತಿಗಳಾರಿ ಶಾಸನಗಳನ್ನು ತುಳು ಶಾಸನಗಳೆಂದು ಪ್ರತಿಪಾದಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ತುಳು ಶಾಸನಗಳು ದೊರೆತಿಲ್ಲ. ತುಳುನಾಡಿನ ಬಹುಭಾಗವನ್ನು ಬಹುಕಾಲ ಆಳಿದ ಅಳುಪರ ಐದು ಶಾಸನಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ದೊರೆತಿವೆ. ಅವು ಕೂಡ ಕನ್ನಡ ಭಾಷೆಯಲ್ಲಿವೆ ಎನ್ನುವುದು ಗಮನಾರ್ಹ. ಉತ್ತರ ಕನ್ನಡ ಜಿಲ್ಲೆಯಲ್ಲಿ ದೊರೆತ ತುಳು ಶಾಸನಗಳು ಎನ್ನುವವೆಲ್ಲ ತಿಗಳಾರಿ ಲಿಪಿಯಲ್ಲಿರುವ ಕನ್ನಡ ಮತ್ತು ಸಂಸ್ಕೃತ ಭಾಷೆಯ ಶಾಸನಗಳಾಗಿವೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಉತ್ತರ ಕನ್ನಡ ಜಿಲ್ಲೆಯ ಅಸ್ಮಿತೆಯ ಭಾಗವಾಗಿರುವ ತಿಗಳಾರಿ ಶಾಸನಗಳನ್ನು ತುಳು ಶಾಸನಗಳು ಎಂದು ವರದಿ ಮಾಡುವುದನ್ನು ಉತ್ತರ ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ.

ಮಾಹಿತಿ ಮತ್ತು ವಿಶ್ಲೇಷಣೆ: ಶ್ಯಾಮಸುಂದರ ಗೌಡ, HERITAGE OF UTTARA KANNADA


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading