
ಹಾಲಕ್ಕಿ ಮಕ್ಕಳು ಹಾಲನ್ನೇ ನೀಡ್ಯಾರ
ನಾಡಿಗೆ ಹಾಲ ಸುರಿಸ್ಯಾರ
ನಾಡಿಗೆ ಹಾಲ ಸುರಿಸ್ಯಾರ ಅಣ್ಣಯ್ಯ
ನಾಡಿನ ಹೆಸರ ಬೆಳೆಸ್ಯಾರ
ಕಂಬಳಿ ಹೊದ್ದಾರ ಅಂಬಲಿ ಕುಡಿದ್ಯಾರ
ನಾಡಿಗೆ ಉಂಬಳಿ ತಂದಾರ
ನಾಡಿಗೆ ಉಂಬಳಿ ತಂದಾರೋ ಅಣ್ಣಯ್ಯ
ಹಿಂದಿನ ಸಂಸ್ಕೃತಿ ಉಳಿಸ್ಯಾರ
ಇಲ್ಲಿಂದ ದಿಲ್ಲಿಗೂ ಸುಗ್ಗಿಯ ಕುಣಿದಾರ
ನಾಡಿಗೆ ಹುಗ್ಗಿಯ ಉಣಿಸ್ಯಾರ
ನಾಡಿಗೆ ಹುಗ್ಗಿಯ ಉಳಿಸ್ಯಾರೋ ಅಣ್ಣಯ್ಯ
ನಮ್ಮಯ ಜನಪದ ಇಟ್ಟಾರ
ಬೆಟ್ಟಾವ ಬೆಳೆದಾರ ಬಯಲಲ್ಲಿ ದುಡಿದ್ಯಾರ
ಬೆವರಲ್ಲೇ ಬೆಲ್ಲ ತಿಂದಾರ
ಬೆವರಲ್ಲೇ ಬೆಲ್ಲ ತಿಂದಾರ ಅಣ್ಣಯ್ಯ
ಬೆಲ್ಲದಂಥ ಸುದ್ದಿಯ ತಂದಾರ
ಹಾಲಕ್ಕಿ ಹಾಲಾಗಿ ಬಯಲೆಲ್ಲ ಹಸಿರಾಗಿ
ನಾಡಿಗೆ ಉಸಿರಾಗಿ ನಿಂತಾರ
ದಿನಕರನ ಜೊತೆಯಲ್ಲಿ ಮಧುಕರನ ಬೆಳಕಂತೆ
ಊರಿನ ಹೆಸರ ಬೆಳೆಸ್ಯಾರ
ರಚನೆ – ಶ್ರೀ ಮಂಜುನಾಥ್ ಹಮ್ಮಣ್ಣ ನಾಯಕ, ಗ್ರಾಮ ಪಂಚಾಯತ್ ಅಧ್ಯಕ್ಷರು ಅಲಗೇರಿ, ಅಂಕೋಲಾ

Leave a Reply