ಪ್ರಕೃತಿ ಸೌಂದರ್ಯದಿಂದ ಸುತ್ತುವರೆದಿರುವ ಶ್ರೀ ಕರಿಕಾನ ಪರಮೇಶ್ವರಿ ದೇವಿಯ ದೇವಸ್ಥಾನ

Posted by

·

ಹೊನ್ನಾವರ ತಾಲೂಕು ನೀಲಕೋಡು ಗ್ರಾಮದ ಅತಿ ಎತ್ತರದ ಬೆಟ್ಟದ ಮೇಲೆ ಅರಣ್ಯದ ಮಧ್ಯದಲ್ಲಿ ಪುರಾತನ ಐತಿಹ್ಯವನ್ನೊಳಗೊಂಡ ‘ಶ್ರೀ ಕರಿಕಾನ ಪರಮೇಶ್ವರಿ’ ಎಂಬ ದೇವಾಲಯವಿದೆ. 1955ರಲ್ಲಿ ವರದಳ್ಳಿಯ ಶ್ರೀಧರ ಸ್ವಾಮಿಗಳಿಂದ ಪುನರುತ್ಥಾನಗೊಂಡಿರುವ ಈ ದೇವಿಯು ತನ್ನಲ್ಲಿಗೆ ಬರುವ ಭಕ್ತರ ಕೋರಿಕೆಗಳನ್ನು ಈಡೇರಿಸುವ ಪ್ರತೀತಿ. ಕುಂಕುಮ, ಬಳೆ, ಸೀರೆ, ಕುಪ್ಪಸಗಳ ಹರಕೆ ಹೊರುವವರಿಗಂತೂ ಲೆಕ್ಕವೇ ಇಲ್ಲ. ಅರಿಷಿನ ಮುಂಡಿಗೆ (ಜಾಂಡೀಸ್) ಬಂದಾಗ ಅರಿಷಿನ ಮೂಟೆಯ ಹರಕೆ ಹೊರುವುದರಿಂದ ರೋಗ ವಾಸಿಯಾಗುವುದೆಂಬ ನಂಬಿಕೆಯಿದೆ.

ಶ್ರೀ ಕರಿಕಾನ ಪರಮೇಶ್ವರಿ ದೇವಸ್ಥಾನ, ಹೊನ್ನಾವರ

ದೇವಾಲಯದ ಸುತ್ತಲೂ ಮನೋಹರವಾದ ಕಾಡುಗಳಿವೆ. ಸಮುದ್ರ ಮಟ್ಟಕ್ಕಿಂತಲೂ ಮೇಲಿರುವ ಈ ಬೆಟ್ಟದ ಪ್ರದೇಶದಿಂದ ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಬೆಟ್ಟದ ಸಾಲುಗಳು, ದೂರದ ಸಮುದ್ರ ತೀರ, ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ವೀಕ್ಷಿಸುವುದೇ ಸಂಭ್ರಮ.

ಕರಿಕಾನಮ್ಮ ದೇವಸ್ಥಾನದಿಂದ 1ಕಿ.ಮೀ. ದೂರದ ದಟ್ಟಡವಿಯಲ್ಲಿ ‘ವಂದಡಿಕೆ’ ಎಂಬ ಶಿವನ ಪುಟ್ಟ ದೇವಾಲಯವಿದೆ. ಆ ಸ್ಥಳದಲ್ಲಿ ಸದಾ ಕಾಲ ಒಂದು ಅಡಿಕೆ ಮರ ಇರುವುದರಿಂದ ‘ವಂದಡಿಕೆ’ (ಒಂದಡಿಕೆ) ಎಂದು ಹೆಸರು ಬಂದಿದೆ. ಅಲ್ಲಿ ಲಿಂಗವು ನಿರಾವರಣವಾಗಿದ್ದು ಸದಾಕಾಲ ಲಿಂಗದ ಮೇಲೆ ಜಲಧಾರೆ ಸುರಿಯುತ್ತದೆ. ಲಿಂಗವು ಮೇಲ್ಭಾಗದಲ್ಲಿ ಒಂದು ಅಡಿಕೆಯಂತೆ ಚಿಕ್ಕದಾಗಿ ಕಂಡರೂ ಅದರ ಬುಡವು ಸಮಸ್ತ ಬ್ರಹ್ಮಾಂಡವನ್ನೇ ಆವರಿಸಿರುವುದೆಂದು ನಂಬಲಾಗುತ್ತದೆ.

ದೇವಿಯ ಮಹಿಮೆ: ಒಂದು ದಿನ ಮುಂಜಾನೆ ಮೇಯಲು ಬಿಟ್ಟ ಗೋವುಗಳು ಸಂಜೆಯಾದರೂ ಮರಳಿ ಬರಲಿಲ್ಲ. ಅಲ್ಲಿಯ ಅರ್ಚಕರಿಗೆ ತುಂಬಾ ಕಳವಳವಾಯಿತು. ಆದರೆ ಆ ವೇಳೆಯಲ್ಲಿ ಗೋವುಗಳನ್ನು ಹುಡುಕಲು ಎಲ್ಲಿಗಂತ ಹೋಗುವುದು. ದೇವರಿಗೆ ಕ್ಷೀರಾರ್ಘ್ಯ ಕೊಡುವುದಕ್ಕೂ ತೊಂದರೆಯುಂಟಾಗುವಂತಹ ಪರಿಸ್ಥಿತಿಯುಂಟಾಯಿತು. ಅರ್ಚಕರು ಬೇರೆ ದಾರಿ ಕಾಣದೇ ದೇವಿಯ ಮೊರೆ ಹೊಕ್ಕು ” ತಾಯೇ ಸರ್ವಕಾರಣಳಾದ ನೀನು ನಿಷ್ಪಾತ ಗೋವುಗಳನ್ನು ರಕ್ಷಿಸು ” ಎಂದು ಬೇಡಿಕೊಂಡು ತನ್ನ ವಸತಿಗೆ ಬರುವಷ್ಟರಲ್ಲಿ ಗೋವುಗಳು ಬಂದು ಸದ್ದು ಮಾಡಲು, ಲಗು ಬಗೆಯಿಂದ ಗೋವುಗಳನ್ನು ಕೊಟ್ಟಿಗೆಯ ಗೂಟಕ್ಕೆ ಕಟ್ಟಿ ಪೂಜೆಯ ವೇಳೆಯಾದುದರಿಂದ ಒಂದೆರಡು ಗೋವುಗಳನ್ನು ಮಾತ್ರ ಕರೆದು ಸುಸೂತ್ರವಾಗಿ ದೇವರ ಪೂಜೆ ಮುಗಿಸಿದರಂತೆ. ಮುಂಜಾನೆ ಪ್ರಾತರ್ವಿಧಿಗಳನ್ನು ತೀರಿಸಿ ಗೋವುಗಳಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋದಾಗ ಒಂದು ಹೆಬ್ಬುಲಿ ( ದೊಡ್ಡ ಗಾತ್ರದ ಹುಲಿ ) ಗೂಟಕ್ಕೆ ಬಿಗಿಯಲ್ಪಟ್ಟಿತ್ತು. ಹುಲಿ, ಗೋವು ಮತ್ತು ಕರುಗಳ ನಡುವೆ ನಿಶ್ಚಿಂತೆಯಿಂದ ಮಲಗಿತ್ತು. ರಾತ್ರಿಯ ವೇಳೆ ಗೋವುಗಳೆಂದು ತಿಳಿದು ತಾನು ಹುಲಿಯನ್ನು ಕಟ್ಟಿಹಾಕಿದ್ದನ್ನು ನೆನೆದು ಅರ್ಚಕರ ಶರೀರ ಕಂಪಿಸಿತು. ಕೊಟ್ಟಿಗೆಯಲ್ಲಿರುವ ಹುಲಿಯನ್ನು ಹೊರಹಾಕುವುದು ಹೇಗೆಂಬ ಚಿಂತೆಯುಂಟಾಯಿತು. ಆದರೆ ಅದನ್ನು ಹೊರಹಾಕದೇ ಬೇರೆ ವಿಧಿಯೇ ಇರಲಿಲ್ಲ. ಕೊನೆಗೆ ದೇವರ ಮೇಲೆ ಭಾರಹಾಕಿ ದೇವಿಯ ಸನ್ನಿಧಿಗೆ ಬಂದ ಅರ್ಚಕರು, ಭಕ್ತಿಯಿಂದ ಕೈಮುಗಿದು ದೇವರ ಪ್ರಸಾದ ತೀರ್ಥಗಳನ್ನು ಒಯ್ದು ದೂರದಿಂದ ಹುಲಿಯ ಮೇಲೆ ಹಾಕಿದರಂತೆ. ತೀರ್ಥಪ್ರಸಾದಗಳು ಸೋಂಕಿದೊಡನೆ ಹುಲಿ ವಿಧೇಯ ಮಕ್ಕಳಂತೆ ತಲೆ ಬಾಗಿ ನಿಂತುಕೊಂಡಿತಂತೆ. ಅರ್ಚಕರು ಅಂಜುತ್ತಾ ಅಂಜುತ್ತಾ ಹುಲಿಯ ಹತ್ತಿರ ಹೋದರೂ ಸಹ ಹುಲಿ ಮಾತ್ರ ನಿರ್ವಿಕಾರವಾಗಿ ಬೇರೆಕಡೆಗೆ ನೋಡುತ್ತಾ ನಿಂತುಕೊಂಡಿತಂತೆ. ಕೊನೆಗೆ ಧೈರ್ಯ ಮಾಡಿ ಹುಲಿಯ ಕೊರಳಿನ ಹಗ್ಗವನ್ನು ಕಳಚಿದೊಡನೆ ಹುಲಿ ಹೊರಬಂದು ದೇವಾಲಯದ ಕಡೆಗೆ ಕ್ಷಣಕಾಲದವರೆಗೆ ನೋಡಿ ಅಡವಿಯನ್ನು ಸೇರಿ ಮಾಯವಾಯಿತಂತೆ. ಅಂದಿನಿಂದಲೇ ದೇವಿಯ ಪರಿವಾರದಲ್ಲಿ ಹುಲಿಗೂ ಒಂದು ಸ್ಥಾನ ಸಿಗುವಂತಾಯಿತು. ದೇವಾಲಯದ ಮುಂದೆ ” ಹುಲಿಯಪ್ಪನ ” ಮೂರ್ತಿ ಸ್ಥಾಪಿಸಲ್ಪಟ್ಟು ಅದಕ್ಕೂ ಉತ್ಸವ ಮತ್ತು ಪೂಜೆಗಳು ದೊರೆಯುವಂತಾಯಿತು. ಅದರಂತೆ ಕ್ಷೇತ್ರರಕ್ಷಕನಾಗಿ ವೀರಭದ್ರನೂ, ಶೃಂಗಿ, ಭೃಂಗಿ ಮುಂತಾದ ಪ್ರಮಥಗಣಗಳೂ ವಾಸವಾದವು. ದೇವಿಯ ಮಂದಿರದ ಸುತ್ತಮುತ್ತ ಕಪ್ಪಾದ ಶಿಲೆಗಳೂ, ಹಚ್ಚಹಸುರಾಗಿ ಸದಾಕಾಲ ಶೋಭಿಸುತ್ತಿರುವ ಅರಣ್ಯ ರಾಶಿಗಳಿಂದ ಹಬ್ಬಿದ ದಟ್ಟ ನೆರಳು ಇವುಗಳಿಂದ ಶ್ರೀಮಾತೆಗೆ “ಕರಿಕಾನ ಪರಮೇಶ್ವರೀ” ಎಂಬ ಹೆಸರು ಶಾಶ್ವತವಾಯಿತು. ದೇವಿಯ ದರ್ಶನಕ್ಕಾಗಿ ದೇವತೆಗಳೂ, ಯಕ್ಷ, ಗಂಧರ್ವ, ಕಿಂಪುರುಷನಾಗಗಳೂ ಮೇಲಿಂದ ಮೇಲೆ ಬರುತ್ತಿದ್ದರೆಂದು ನಂಬಲಾಗುತ್ತದೆ. ದೇವಾಲಯದ ಸಮೀಪ ಒಂದು ನೀರಿನ ಕೊಳವಿದ್ದು, ಬೇಸಿಗೆಯ ಸುಡುಬಿಸಿಲಿನಲ್ಲೂ ಅಲ್ಲಿ ನೀರಿಗೆ ಕೊರತೆಯಾಗುವುದಿಲ್ಲ. ಸಹ್ಯಾದ್ರಿ ಪರ್ವತಗಳಿಂದ ಉದ್ಭೂತವಾಗುವ ನೀರು ಅನೇಕ ಔಷಧೀಯ ಗುಣಗಳನ್ನೂ ತನ್ನಲ್ಲಿ ಹೊಂದಿದೆ.

ಮಾಹಿತಿ: ಗಜೇಂದ್ರ ಕುಮಟಾ, UK EXPRESS


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading