ಹೇಳಿಕೇಳಿ ದಟ್ಟ ಅರಣ್ಯದ ಬೀಡು ಉತ್ತರಕನ್ನಡ. ವನ್ಯರಾಶಿಯೊಳಗೆ ವನ್ಯಜೀವಿಗಳು ಬೀಡುಬಿಟ್ಟಿವೆ. ಹೆಜ್ಜೆ ಹೆಜ್ಜೆಗೂ ಕೌತುಕ ಮೂಡಿಸುವ ಒಂದಿಷ್ಟು ಅರಣ್ಯಧಾಮಗಳ ಪರಿಚಯ ನಿಮಗಾಗಿ.

ದಾಂಡೇಲಿ

ಮುಖ್ಯವಾಗಿ ಇಲ್ಲಿ ಹುಲಿ ಸಂರಕ್ಷಿತ ಪ್ರದೇಶ ಇದೆ. 8 ಸಾವಿರ ಚ.ಕಿ.ಮೀ. ಪ್ರದೇಶವನ್ನು ಇದು ಒಳಗೊಂಡಿದೆ. ಇಲ್ಲೇ ಆನೆ ಧಾಮವೂ ಬರುತ್ತಿರುವುದು ವಿಶೇಷವಾಗಿದೆ. ಆನೆ ಸಫಾರಿ, ಸಫಾರಿ ಇಲ್ಲಿನ ವಿಶೇಷವಾಗಿದೆ. ದಟ್ಟವಾದ ನಿತ್ಯಹರಿದ್ವರ್ಣದ ಕಾಡಿನಲ್ಲಿ ಹುಲಿ, ಚಿರತೆ, ಕಾಡುಕೋಣ, ಜಿಂಕೆ, ಕಡವೆ ಮತ್ತಿತರ ಪ್ರಾಣಿಗಳನ್ನು ನೋಡಬಹುದು. ಹಾರ್ನಬಿಲ್ಗಳ ತಾಣವಾಗಿದೆ. ಪಕ್ಷಿ ವೀಕ್ಷಣೆಯೂ ಮತ್ತೊಂದು ಆಕರ್ಷಣೆಯಾಗಿದೆ. ಮೊಸಳೆ ಪಾರ್ಕ್ ಕೂಡ ಇದೆ. ಬೆಂಗಳೂರಿನಿಂದ 400 ಕಿ.ಮೀ. ದೂರದಲ್ಲಿದೆ.
ಶರಾವತಿ ಅಭಯಾರಣ್ಯ

ಶರಾವತಿ ನದಿಯ ಕಣಿವೆಯುದ್ಧಕ್ಕೂ ಈ ಅಭಯಾರಣ್ಯ ಹರಡಿಕೊಂಡಿದೆ. ದಟ್ಟ ಅರಣ್ಯ, ಅಪರೂಪದ ಜೀವ ವೈವಿಧ್ಯತೆ ಇಲ್ಲಿದೆ. ಅಳಿವಿನ ಅಂಚಿನಲ್ಲಿರುವ ಸಿಂಗಳೀಕಗಳ ಹಿಂಡು, ಕಂಬಾರ ಕಪ್ಪೆ, ಚಿರತೆ, ಕರಡಿ ಮತ್ತಿತರ ಪ್ರಾಣಿಗಳಿವೆ. ಇದು ಹೊನ್ನಾವರ ತಾಲೂಕಿನಲ್ಲಿದೆ. ತಾಲೂಕು ಕೇಂದ್ರದಿಂದ 40 ಕಿ.ಮೀ. ದೂರದಲ್ಲಿದೆ. ಇಲ್ಲಿ ತಲುಪಲು ಹೊನ್ನಾವರ ಸಾಗರ ರಸ್ತೆಯಲ್ಲಿ ಪ್ರಯಾಣಿಸಬೇಕು.
ಬೇಡ್ತಿ ಕಣಿವೆ

ಬೇಡ್ತಿ ನದಿ ಕಣಿವೆಯಲ್ಲಿ ಈ ಅರಣ್ಯ ಪ್ರದೇಶವಿದೆ. ನಿತ್ಯ ಹರಿದ್ವರ್ಣ ಕಾಡು. ಅಪರೂಪದ ಜೀವ ವೈವಿಧ್ಯತೆ ಇಲ್ಲಿನ ವಿಶೇಷ. ಈ ಅರಣ್ಯವು ಯಲ್ಲಾಪುರ ತಾಲೂಕಿನಲ್ಲಿದೆ. ತಾಲೂಕು ಕೇಂದ್ರದಿಂದ ಕೇವಲ 15 ಕಿ.ಮೀ. ಅಂತರದಿಂದ ಬೇಡ್ತಿ ಕಣಿವೆ ತಲುಪಬಹುದು. ಆಫ್ರಿಕಾದಿಂದ ವಲಸೆ ಬಂದ ಸಿದ್ದಿಗಳು ಈ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ.
ಅಘನಾಶಿನಿ ಕಣಿವೆ

ಅರಣ್ಯ ಅಘನಾಶಿನಿ ನದಿ ಕಣಿವೆಯಲ್ಲಿ ಈ ಅರಣ್ಯ ವ್ಯಾಪಿಸಿದೆ. ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ಹರಡಿಕೊಂಡಿದೆ. ಅಪರೂಪದ ಔಷಧ ಸಸ್ಯಗಳು, ಜೀವ ವೈವಿಧ್ಯತೆ ಇಲ್ಲಿದೆ. ದಟ್ಟವಾದ ಅರಣ್ಯ ಇಲ್ಲಿದೆ. ಶಿರಸಿ ಹಾಗೂ ಸಿದ್ದಾಪುರಗಳಿಂದ 20 ಕಿ. ಮೀ. ದೂರದಲ್ಲಿ ಅಘನಾಶಿನಿ ಕಣಿವೆಯನ್ನು ಕಾಣಬಹುದು.
ಅಣಶಿ ಅಭಯಾರಣ್ಯ

ಇದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲೆ ಬರುತ್ತದೆ. ಇದು ಜೋಯಿಡಾ ತಾಲೂಕಿನಲ್ಲಿದೆ. ಪರ್ವತ ಶ್ರೇಣಿಯುದ್ದಕ್ಕೂ ದಟ್ಟವಾದ ಕಾಡು ಇದೆ. ಇಲ್ಲಿ ಹುಲಿ, ಚಿರತೆ, ಕಾಡುಕೋಣ, ಜಿಂಕೆಗಳಿವೆ. ಜೀವ ವೈವಿಧ್ಯತೆ ವಿಪುಲವಾಗಿದೆ. ಇಲ್ಲಿ ಅರಣ್ಯ ಇಲಾಖೆ ನೇಚರ್ ಕ್ಯಾಂಪ್ ನಿರ್ಮಿಸಿದೆ. ಜೋಯಿಡಾ ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ ಅಣಶಿ. ಸುಮಾರು 150 ಚ.ಕೀ.ಮೀ. ಅರಣ್ಯ ಪ್ರದೇಶ ಅಣಶಿ ವಲಯದಲ್ಲಿ ಬರುತ್ತಿದೆ.


Leave a Reply