ಕಲಿವ ಮಗಳಿಗಿಂತ ಕಲಿಸುವ ಅಪ್ಪನಿಗೇ ಉಮೇದಿ ಎಂದೇನೂ ಮುಸಿಮುಸಿ ನಗಬೇಡಿ. ಹಾಲುಗುಂಬಳದಂತಹ ಕರುಳುಕುಡಿಗೆ ಒಳಪೆಡ್ಲು ಕಲಿಸುವುದನ್ನು ನೀವೊಮ್ಮೆ ಅನುಭವಿಸಿಯೇ ತೀರಬೇಕು. ಅದಕ್ಕೇ ಹೇಳುವುದು ಎಲ್ಲ ಅಪ್ಪಂದಿರಿಗೆ ಕುಡಿಬಾಳೆ ಎಲೆಯಂತಹ ಮುದ್ದಾದ ಮಗಳೊಬ್ಬಳಿರಬೇಕು..
ಎಂಬ ಮಾನವೀಯ ಮನಸ್ಸಿನ, ಜನಪರ ನಿಲುವಿನ, ತಂದೆ-ಮಗಳ ನಿತ್ಯ ಬದುಕಿನ ಸತ್ಯವನ್ನು ಕಣ್ಣಾರೆ ಕಂಡು ಸಾಮಾನ್ಯ ಸಂಗತಿಗಳನ್ನೂ ಕಾವ್ಯವಾಗಿಸುವ ಶಾಲಾ ಮಕ್ಕಳೊಡನೆ ಬೆರೆತು ಮಗುಮನ-ನಗುಮನ ಪಡೆದ ರೇಣುಕಾ ರಮಾನಂದ, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೆಟಗೇರಿ ಎಂಬ ಸಣ್ಣ ಹಳ್ಳಿಯವರು. ರೇಣುಕಾ ಈಗ ಕನ್ನಡದಲ್ಲಿ ಬರೆಯುತ್ತಿರುವ ಸೂಕ್ಷ್ಮ ಸಂವೇದನೆಯ, ಮಣ್ಣಿನ ವಾಸನೆಯ, ಕಾಡೊಡಲು-ಕಡಲೊಡಲಿನ ಮತ್ತು ಮೀನು ಪೇಟೆಯ ತಿರುವಿನ ಬರಹಗಾರ್ತಿ. ಇವರ ಕವಿತೆಗಳೇ ಹೀಗೆ ; ಕಡಲಿನ ಅಬ್ಬರದ ತೆರೆಗಳಂತೇ ಕಂಡರೂ ಒಳಗೊಳಗೇ ಶಾಂತವಾಗುವ ನೊರೆಗಳಂತೆ ನೀರಲಿ ಬೆರೆತು ಮತ್ತೆ ಸಾಗರದಲೊಂದಾಗುವದು. ಇವರ ಕವಿತೆಗಳಲ್ಲಿ ಅಕ್ಷರದ ಸತ್ವಗಳಂತೇ ಮಾನವೀಯತೆ ಇದೆ, ಪ್ರೀತಿ-ಪ್ರೇಮಗಳಿವೆ, ಉತ್ಕಟವಾದ ಜೀವನಾನುಭವವಿದೆ, ಮಗು ಮನಸ್ಸಿನೊಂದಿಗೆ ಮಹಿಳಾ ಅಭಿವ್ಯಕ್ತಿಯ ಮುಕ್ತದಾರಿಯ ಮಗ್ಗುಲನ್ನು ಚಿಂತಿಸುವ ಕವಲು ದಾರಿಯಿದೆ. ಈ ಎಲ್ಲಾ ಸತ್ವಯುತವಾದ ಸಾಲುಗಳಿಂದಲೇ ಇವರ ಮೊದಲ ಕವನ ಸಂಕಲನ “ಮೀನುಪೇಟೆಯ ತಿರುವು” ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದುಕೊಂಡಿದೆ.

ತಮ್ಮ ಏಳನೆಯ ವಯಸ್ಸಿನಲ್ಲಿಯೇ ಆಕಸ್ಮಿಕ ಆಘಾತದಿಂದ ನಿಧನ ಹೊಂದಿದ ಅಣ್ಣ ಗಜಾನನನ ಅಗಲಿಕೆ ಅರಗಿಸಿಕೊಳ್ಳಲಾಗದ ರೇಣುಕಾ, ಮುಂದಿನ ದಿನಗಳಲ್ಲಿ ತಾನೋರ್ವ ಉತ್ತಮ ಶಿಕ್ಷಕಿ ಹಾಗೂ ಬರಹಗಾರ್ತಿ ಆಗುವೆ ಎಂದು, ಎಂದೂ ಕನಸು ಕಂಡವರಲ್ಲ. ಆದರೆ ಶಿಕ್ಷಕಿಯಾಗಿ ಮಕ್ಕಳ ಮನದೊಳಗೆ ನೆಲೆನಿಂತು, ಆ ಖುಷಿಯನ್ನು ತನ್ನದಾಗಿಸಿಕೊಳ್ಳಲು, ಅಂಕೋಲೆಯ ಪ್ರತಿಷ್ಠಿತ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಆ ವರ್ಷ ಪಿಯುಸಿಯಲ್ಲಿ ಕ್ಲಾಸಿಗೇ ಪ್ರಥಮರಾಗಿ ಉತ್ತೀರ್ಣರಾದ ರೇಣುಕಾ, ಇನ್ನಿತರ ಸ್ವ-ಹಿತಾಸಕ್ತಿಯ ಹತ್ತು ಹಲವು ಬದುಕುವ ಹಾದಿಗಳನ್ನು ಬದಿಗಿಟ್ಟು ಪ್ರಾಥಮಿಕ ಶಾಲಾ ಶಿಕ್ಷಕಿಯ ಹುದ್ದೆಯನ್ನು ಇಷ್ಟಪಟ್ಟು ಆಯ್ದುಕೊಂಡದ್ದಂತೂ ನೂರಕ್ಕೆ ನೂರು ಸತ್ಯ.

ಸಾಹಿತ್ಯವು ಇವರಿಗೆ ಕೌಟುಂಬಿಕವಾಗಿ ಬಂದ ಬಳುವಳಿ ಏನಲ್ಲಾ. ಬಡತನ ಇಲ್ಲದಿದ್ದರೂ ಸೀದಾ ಸಾದಾ ಮನೆಯಲ್ಲಿ ಹುಟ್ಟಿದ ರೇಣುಕಾ, ಓದಿನ ಹುಚ್ಚು ಮೊದಲಿನಿಂದಲೂ ರೂಢಿಸಿಕೊಂಡಿದ್ದರು. ಪಿಯುಸಿ ಹಂತದಲ್ಲಿ ಆಗಾಗ ಕವಿತೆ ಬರೆಯುತ್ತಿದ್ದ ಇವರಿಗೆ ಬರವಣಿಗೆಯ ಅಭಿರುಚಿ ಮತ್ತು ಪ್ರೋತ್ಸಾಹಕ್ಕೆ ಕಾರಣ ಕಾರವಾರದಿಂದ ಹೊರಡುವ “ಕರಾವಳಿ ಮುಂಜಾವು” ದಿನಪತ್ರಿಕೆ. ಒಂದು ದೃಷ್ಟಿಯಿಂದ ನೋಡಿದರೆ ಇವರು ಬರೆದದ್ದು ಕಡಿಮೆಯೇ ; “ವಿರಳ ಬರಹಗಾರ್ತಿ” ಎಂದೇ ಹೇಳಬಹುದು. ಆದರೆ ಬರೆದ ಅಕ್ಷರಗಳೆಲ್ಲವೂ ಕೀರ್ತಿ ತಂದುಕೊಟ್ಟಿತು ಎಂಬ ಪಿಸುಮಾತಿಗೆ ಇವರ ಮುಖದ ತುಂಬೆಲ್ಲಾ ಅಕ್ಷರಗಳೇ ಕುಣಿದಾಡುವುದು. 2017 ರಲ್ಲಿ ಮೊದಲ ಪುಸ್ತಕ “ಮೀನು ಪೇಟೆಯ ತಿರುವು” ಪ್ರಕಟವಾದರೂ ತಮ್ಮ ಬಿಡಿ-ಬಿಡಿಯಾದ ಕಥೆ-ಕವನಗಳ ಮುಖಾಂತರ ನಾಡಿನಾದ್ಯಂತ ಹೆಸರುಗಳಿಸಿ, ಕೀರ್ತಿಯು ನೆರೆಯ ರಾಜ್ಯಗಳ ಕನ್ನಡಾಭಿಮಾನಿಗಳ ಗಮನವನ್ನೂ ಸೆಳೆಯಿತು. ಮೈಸೂರು ಅಸೋಸಿಯೇಷನ್ ಮುಂಬೈ ನೇಸರು ಜಾಗತಿಕ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜೀವನ ಪ್ರಕಾಶನ ಚಿಕ್ಕಬಳ್ಳಾಪುರ ಏರ್ಪಡಿಸಿದ್ದ ಯುಗಾದಿ ಕಾವ್ಯ ಸ್ಪರ್ಧೆಯಲ್ಲಿ ಮೊದಲನೆಯ ಬಹುಮಾನ, ಎರಡು ಸಾರಿ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ, ಸಂಕ್ರಮಣ ಕಾವ್ಯ ಬಹುಮಾನ ಹೀಗೆ ಹತ್ತು ಹಲವು. ಕವಿತೆಯಂತೆ ಕಥೆಯೂ ಇವರ ಕೈ ಹಿಡಿಯಿತು. ಕಾರವಾರದ ಕರಾವಳಿ ಮುಂಜಾವಿನ ಕಥೆಗೆ ಮೊದಲ ಬಹುಮಾನ, ತುಷಾರ ಮತ್ತು ಕಾವ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾ ಬಹುಮಾನ, ಮುಂಬೈನ ಗೋಕುಲ ವಾಣಿ ಕಥಾ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ಕಥಾ ಬಹುಮಾನ.. ಹೀಗೇ.
✍️ ಪ್ರಕಾಶ ಕಡಮೆ


Leave a Reply